ADVERTISEMENT

ಮತ್ತಷ್ಟು ಕೆಲಸಕ್ಕಾಗಿ ನನ್ನನ್ನು ಬೆಂಬಲಿಸಿ: ರಾಮದಾಸ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 11:29 IST
Last Updated 20 ಮಾರ್ಚ್ 2023, 11:29 IST
ಜಯನಗರದಲ್ಲಿ ಶಾಸಕ ಎಸ್.ಎ.ರಾಮದಾಸ್ ಸ್ಥಳೀಯರೊಂದಿಗೆ ಸೋಮವಾರ ಮಾತುಕತೆ ನಡೆಸಿದರು
ಜಯನಗರದಲ್ಲಿ ಶಾಸಕ ಎಸ್.ಎ.ರಾಮದಾಸ್ ಸ್ಥಳೀಯರೊಂದಿಗೆ ಸೋಮವಾರ ಮಾತುಕತೆ ನಡೆಸಿದರು   

ಮೈಸೂರು: ‘ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿದ್ದರೂ ಇನ್ನೂ ಮಾಡಬೇಕಾದ ಹತ್ತು ಹಲವು ಕೆಲಸಗಳಿವೆ. ಆ ಕಾರಣಕ್ಕಾಗಿ ನನ್ನನ್ನು ಮತ್ತೊಮ್ಮೆ ಆಶೀರ್ವದಿಸಬೇಕು’ ಎಂದು ಶಾಸಕ ಎಸ್.ಎ.ರಾಮದಾಸ್ ಜನರಲ್ಲಿ ಮನವಿ ಮಾಡಿದರು.

ವಾರ್ಡ್‌ ನಂ.48ರ ಜಯನಗರದ ರಾಮಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಯೋಗ ಕ್ಷೇಮ ಯಾತ್ರೆಯಲ್ಲಿ ಅವರು ಮಾತನಾಡಿದರು.

‘ಅಭಿವೃದ್ಧಿ ವಿಚಾರದಲ್ಲಿ ಕೆ.ಆರ್.ಕ್ಷೇತ್ರ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.‌ ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸಾರ್ವಜನಿಕವಾಗಿ ಹೇಳಿದ್ದಾರೆ. ಈ ಮಾಹಿತಿ ತಿಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಸಾರ್ವಜನಿಕ ಸಮಾವೇಶದಲ್ಲಿ ನನ್ನನ್ನು ಬೆನ್ನು ತಟ್ಟಿ ಆಶೀರ್ವದಿಸಿದ್ದಾರೆ’ ಎಂದರು.

ADVERTISEMENT

‘9,200 ಗರ್ಭಿಣಿಯರಿಗೆ ಮಡಿಲು ಯೋಜನೆ ತಲುಪಿಸಲಾಗಿದೆ’ ಎಂದು ತಿಳಿಸಿದರು.

‘ಬೀದಿ ನಾಯಿಗಳು ಹಾಗೂ ಕೋತಿಗಳಿಗೂ ಗೌರವಯುತ ಬದುಕು ಕಲ್ಪಿಸಲು ಅವುಗಳಿಗಾಗಿ ಸುಸಜ್ಜಿತವಾದ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಇದೇ 25ರಂದು ಪುನರ್ವಸತಿ ಕೇಂದ್ರ ಉದ್ಘಾಟಿಸಲಾಗುವುದು’ ಎಂದು ಹೇಳಿದರು.

‘ಕ್ಷೇತ್ರದಲ್ಲಿರುವ ತುಳಸೀದಾಸ್ ದಾಸಪ್ಪ ಆಸ್ಪತ್ರೆ ಹಾಗೂ ಜಯನಗರ ಆಸ್ಪತ್ರೆಗಳು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದೆ. ಪರಿಣಾಮ, ಜಯನಗರ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ₹ 36 ಲಕ್ಷ ಬಹುಮಾನ ಬಂದಿದೆ. ಅದೂ ಒಂದು ದಾಖಲೆಯಾಗಿದೆ’ ಎಂದು ತಿಳಿಸಿದರು.

‘ಯೋಗಕ್ಷೇಮ ಯಾತ್ರೆಯ ಮೂಲಕ ಅಭಿವೃದ್ಧಿ ಕೆಲಸವನ್ನು ಜನರ ಮುಂದೆ ಇಡುವ ಕೆಲಸ ನಡೆದಿದೆ. ಈ ವೇಳೆ ಜನರ ಪ್ರೀತಿ–ವಿಶ್ವಾಸ ನಿರೀಕ್ಷೆಗೂ ಮೀರಿ ದೊರೆಯುತ್ತಿದೆ. ಜಾತಿ ಮೀರಿ ಅಭಿವೃದ್ಧಿ ಮಂತ್ರದ ಆಧಾರದ ಮೇಲೆ ಕ್ಷೇತ್ರದ ಜನ ನನ್ನನ್ನು ನೋಡುತ್ತಿರುವುದು ಹೆಚ್ಚು ಸಂತೋಷ ತಂದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.