ADVERTISEMENT

'ಡಿಕೆಶಿ ಮಾಡಿದ್ದಾರೆ ಅಂತ ಯಾರಾದರೂ ಹೇಳಿದ್ದಾರಾ?'–ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 21:07 IST
Last Updated 14 ಮಾರ್ಚ್ 2021, 21:07 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ    

ಮೈಸೂರು: ‘ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‌ ಹೆಸರನ್ನು ಯಾರು ಹೇಳಿದ್ದಾರೆ? ಅವರ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಇಲ್ಲಿ ಪ್ರಶ್ನಿಸಿದರು.

ಸಿ.ಡಿ ಪ್ರಕರಣದಲ್ಲಿ ಬಿಜೆಪಿಯವರು ತಮ್ಮನ್ನು ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರೇ ಮಾಡಿದ್ದಾರೆ ಅಂತ ಯಾರಾದರೂ ಹೇಳಿದರೇ? ಇದರ ಹಿಂದೆ ‘ಮಹಾನ್‌ ನಾಯಕನೊಬ್ಬ’ ಇದ್ದಾನೆ ಎಂದಷ್ಟೇ ಹೇಳಿದ್ದರು. ಆ ಮಹಾನ್‌ ನಾಯಕ ಇವರೇ ಅಂತ ಏಕೆ ಅಂದುಕೊಂಡುಬಿಟ್ರು? ಈ ರಾಜ್ಯದಲ್ಲಿ ಮಹಾನ್‌ ನಾಯಕರು ತುಂಬಾ ಜನ ಇದ್ದಾರೆ. ಬಿಜೆಪಿಯಲ್ಲೇ ಒಬ್ಬ ಮಹಾನ್‌ ನಾಯಕ ಬೆಳೆಯುತ್ತಿದ್ದಾರೆ’ ಎಂದರು.

‘ಡಿ.ಕೆ.ಶಿವಕುಮಾರ್ ಬಹಳ ಪ್ರಬುದ್ಧ ರಾಜಕಾರಣಿ. ಅವರಿಗೆ ಇರುವಷ್ಟು ಅನುಭವ ನಮಗೂ ಇಲ್ಲ. ದುಡುಕಿನಿಂದ ಅವರ ಹೆಸರನ್ನು ಅವರೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಏಕೆ ತಮ್ಮ ಹೆಸರನ್ನು ಸಿಲುಕಿಸಿಕೊಳ್ಳಲು ಹೊರಟಿದ್ದಾರೋ ಗೊತ್ತಿಲ್ಲ’ ಎಂದು ನುಡಿದರು.

ADVERTISEMENT

‘ಎಸ್‌ಐಟಿ ಅಧಿಕಾರಿಗಳು ಯಾವುದೇ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.