ಮೈಸೂರು: ಕಟ್ಟಡ ಕಾರ್ಮಿಕರಿಗೆ ₹ 10 ಸಾವಿರ ಪರಿಹಾರಧನ ವಿತರಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಕಲ್ಯಾಣ ಮಂಡಳಿಯು ‘ಸೆಸ್’ ರೂಪದಲ್ಲಿ ₹ 10 ಸಾವಿರ ಕೋಟಿಯಷ್ಟು ಹಣ ಸಂಗ್ರಹಿಸಿದೆ. ಈ ಹಣದಲ್ಲಿ ಕಾರ್ಮಿಕರಿಗೆ ಪರಿಹಾರ ಧನ ವಿತರಿಸಬೇಕು. ಈಗ ಘೋಷಿಸಿರುವ ನೆರವು ಸಾಲದು ಎಂದು ಅವರು ಹೇಳಿದರು.
‘ಸೆಸ್’ ಹಣದಲ್ಲಿ ಖರೀದಿಸಿದ ಆಹಾರ ಕಿಟ್ಗಳನ್ನು ಶಾಸಕರ ಮೂಲಕ ವಿತರಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದ ಅವರು, ಕಿಟ್ ಖರೀದಿಯಲ್ಲೇ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಅಸಂಘಟಿತ ವಲಯದಲ್ಲಿ ಕೋಟ್ಯಂತರ ಜನರು ದುಡಿಯುತ್ತಿದ್ದಾರೆ. ಇವರಿಗೆ ನೆಪಮಾತ್ರಕ್ಕೆ ಎಂಬಂತೆ ಒಂದಿಷ್ಟು ಪರಿಹಾರ ಘೋಷಿಸಲಾಗಿದೆ. ಇದರ ಜತೆಗೆ, ಸಾಮಾಜಿಕ ಭದ್ರತಾ ಯೋಜನೆಯನ್ನು ಜಾರಿಗಳಿಸಿ ಹೆಚ್ಚಿನ ಹಣ ನೀಡಬೇಕು ಎಂದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಕಾರರು ತೆರಳಿ ಮನವಿ ಪತ್ರ ಸಲ್ಲಿಸಿದರು.
ಮುಖಂಡರಾದ ಬಾಲಾಜಿರಾವ್, ಜಗನ್ನಾಥ್, ಜಿ.ಜಯರಾಮು, ಬಸವಯ್ಯ, ಶಶಿಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.