ADVERTISEMENT

ಮೈಸೂರು: ಸಚಿವರಿಂದ ಅಧಿಕಾರಿಗಳಿಗೆ ‘ವೃತ್ತಿ’ ಪಾಠ

ನಾಲ್ಕು ತಾಸು ಪ್ರಗತಿ ಪರಿಶೀಲನೆ ನಡೆಸಿದ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:46 IST
Last Updated 8 ನವೆಂಬರ್ 2025, 4:46 IST
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು ಪ್ರಜಾವಾಣಿ ಚಿತ್ರ
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದರು ಪ್ರಜಾವಾಣಿ ಚಿತ್ರ   

ಮೈಸೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲ್ಲಿನ ಪ್ರಾದೇಶಿಕ‌ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸತತ ನಾಲ್ಕು ತಾಸು, ಇಲಾಖೆಯ ಕಾರ್ಯಕ್ರಮಗಳ ಪರಿಶೀಲನಾ ಸಭೆ ನಡೆಸಿದರು. ‘ಬಡವರಿಗೆ ಮಾನವೀಯತೆಯಿಂದ ಸ್ಪಂದಿಸಿ ಕೆಲಸ ಮಾಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕಂದಾಯ ಇಲಾಖೆಯಲ್ಲಿ ರೈತರು ಹಾಗೂ ಬಡವರ ಕೆಲಸ ಹೆಚ್ಚಿದೆ. ಅವರಿಗೆ ಆದ್ಯತೆ ನೀಡುತ್ತಿಲ್ಲ. ಬಡವರ ಕೆಲಸಕ್ಕಾಗಿ ಪ್ರತ್ಯೇಕವಾಗಿ ನೇಮಕಾತಿ ಮಾಡಬೇಕೆ?’ ಎಂದು ಕೇಳಿದ ಅವರು, ‘ಅಧಿಕಾರಿಗಳು ಬಡವರ ಕೆಲಸವನ್ನು ಆದ್ಯತೆ ಮೇರೆಗೆ ಮಾಡಿಕೊಡಬೇಕು’ ಎಂದು ನಿರ್ದೇಶನ ನೀಡಿದರು.

ಎಚ್‌.ಡಿ. ಕೋಟೆಯಲ್ಲಿ ಗೋಮಾಳ ಎಂಬ ಕಾರಣಕ್ಕೆ 94 ‘ಸಿ’ಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಸ್ವೀಕರಿಸಿಲ್ಲ. ‘ಗೋಮಾಳವಿದ್ದರೆ 94 ‘ಸಿ’ ಕೊಡಬಾರದು ಎಂದು ಯಾವ ಕಾನೂನು ಹೇಳಿದೆ? ನಾನು ನೋಟಿಸ್‌ ನೀಡಿದಾಗ ಅದೇ ಸರಿ ಎನ್ನುವಂತೆ ಉತ್ತರಿಸಿದ್ದೀರಿ. ನೀವು ನೀಡುವ ದಾಖಲೆಗೆ ಕಣ್ಣುಮುಚ್ಚಿ ಸಹಿ ಮಾಡಿದರೆ ಅಲ್ಲಿ ಬದುಕಬೇಕಾದವನು ಸೌಲಭ್ಯ ವಂಚಿತನಾಗುತ್ತಾನೆ. ಅರಣ್ಯ, ಕೆರೆ, ನಕ್ಷೆಯಲ್ಲಿರುವ ರಸ್ತೆ ಬಿಟ್ಟು ಬಾಕಿ‌ ಕಡೆ 94 ‘ಸಿ’ ಅರ್ಜಿ ಬಂದರೆ ಕಳಿಸಿಕೊಡಿ’ ಎಂದು ತಹಶೀಲ್ದಾರ್‌ ಹಾಗೂ ಆರ್‌ಐಗೆ ತಿಳಿಸಿದರು.

ADVERTISEMENT

‘ಜುಲೈನಿಂದ 47 ಕಂದಾಯ ಹಾಗೂ ಉಪ ಗ್ರಾಮ ಗುರುತಿಸಿದ್ದು, 26 ಗ್ರಾಮದ ಬಗ್ಗೆ ಪ್ರಾಥಮಿಕ ಅಧಿಸೂಚನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ, 21 ಬಾಕಿ ಇದೆ. ಪಿರಿಯಾಪಟ್ಟಣ ಹಾಗೂ ನಂಜನಗೂಡಿನಲ್ಲಿ ಏಕೆ ಬಾಕಿಯಾಗಿದೆ. ಡಿ. 31ರೊಳಗೆ ಅಂತಿಮ ಅಧಿಸೂಚನೆಯಾದರೆ ಕಂದಾಯ, ಉಪ ಗ್ರಾಮ ಮಂಜೂರಾಗಲಿದೆ. ತ್ವರಿತವಾಗಿ ಕೆಲಸ ಮುಗಿಸಬೇಕು’ ಎಂದು ಸೂಚಿಸಿದರು.

‘ಮಳೆಯಿಂದಾಗಿ ಸಂಪೂರ್ಣ ಶಿಥಿಲಗೊಂಡ ಮನೆಗಳನ್ನು ಮರು ನಿರ್ಮಿಸಿಕೊಟ್ಟಿದ್ದೀರಾ? ಮನೆ ನೀಡುವುದು ಮುಖ್ಯಮಂತ್ರಿಯವರ ಆಶಯ. ಅದನ್ನು ಪಾಲಿಸಿ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಸೂಚಿಸಿದರು. 

ಇ– ಕಚೇರಿ ವ್ಯವಸ್ಥೆ ಅನುಷ್ಠಾನ: ‘ಮುಂದಿನ ತಿಂಗಳಿನಿಂದ ಗ್ರಾಮಾಡಳಿತಾಧಿಕಾರಿ ಮಟ್ಟದಲ್ಲೂ ಇ- ಕಚೇರಿ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ತಿಳಿಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಇಲ್ಲಿವರೆಗೂ ತಹಶೀಲ್ದಾರ್‌ ಮಟ್ಟದಿಂದ ಇ- ಕಚೇರಿ ಜಾರಿಯಲ್ಲಿತ್ತು. ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮಾಡಳಿತಾಧಿಕಾರಿ ಮಟ್ಟದಲ್ಲಿ ಇ-ಕಚೇರಿ ಅನುಷ್ಠಾನವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಈಗ ರಾಜ್ಯದಾದ್ಯಂತ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ತಿಳಿಸಿದರು.

‘ಗ್ರಾಮಾಡಳಿತಾಧಿಕಾರಿ ಮಟ್ಟದಲ್ಲಿ ಇ- ಕಚೇರಿ ಜಾರಿಯಾದರೆ ರೈತರು ಹಾಗೂ ವಿವಿಧ ಫಲಾನುಭವಿಗಳು ತಮ್ಮ ಕೆಲಸ ಕಾರ್ಯಗಳಿಗೆ ನಾಡಕಚೇರಿಗೆ ಅಲೆಯುವುದು ತಪ್ಪುತ್ತದೆ. ವಿಎ ಮಟ್ಟದಲ್ಲಿ ಕಡತ ವಿಲೇವಾರಿ ವಿಳಂಬವಾಗುವುದು ನಿಲ್ಲುತ್ತದೆ. ಕೆಲಸ ಕಾಲಮಿತಿಯೊಳಗೆ ಆಗುತ್ತದೆ’ ಎಂದು ತಿಳಿಸಿದರು.

‘ಕಂದಾಯ ಇಲಾಖೆಯ ಕೆಲಸವನ್ನು ಡಿಜಿಟಲೀಕರಣ ಮಾಡಲಾಗಿದ್ದು, ಮನೆಯಲ್ಲೇ ಕುಳಿತು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇಂತಹ ವ್ಯವಸ್ಥೆಯನ್ನು ಸರ್ಕಾರ ಅನುಷ್ಠಾನಗೊಳಿಸಿರುವುದನ್ನು ಸಾರ್ವಜನಿಕರಿಗೆ ಮಾಹಿತಿ ನೀಡಲು ಮುಂದಿನ ದಿನಗಳಲ್ಲಿ ಜಾಗೃತಿ ಅಭಿಯಾನಗಳಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದರು.

49 ಕೋಟಿ ಪುಟ ಸ್ಕ್ಯಾನಿಂಗ್‌: ಕಂದಾಯ ಇಲಾಖೆಗೆ ಸಂಬಂಧಿಸಿದ ಹಳೆಯ ಕಡತಗಳು, ಶಿಥಿಲಗೊಂಡಿದ್ದ ದಾಖಲೆಗಳನ್ನು ನಾಶವಾಗದಂತೆ ಕಾಪಾಡುವ ದೃಷಿಯಿಂದ, ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಮೂಲ ದಾಖಲೆಗಳನ್ನು ಗಣಕೀಕೃತಗೊಳಿಸಿ ಸ್ಕ್ಯಾನಿಂಗ್‌ ಮಾಡಲಾಗುತ್ತಿದೆ. ಈಗಾಗಲೇ ₹ 49.68 ಕೋಟಿ ಪುಟಗಳನ್ನು ಸ್ಕ್ಯಾನಿಂಗ್‌ ಮಾಡಲಾಗಿದೆ. ಇನ್ನೂ ₹ 50 ಕೋಟಿಗೂ ಹೆಚ್ಚು ಪುಟಗಳನ್ನು ಸ್ಕ್ಯಾನಿಂಗ್‌ ಮಾಡಬೇಕಾಗಿದೆ. ಮುಂದಿನ ಫೆಬ್ರುವರಿಯೊಳಗೆ ಈ ಕೆಲಸವನ್ನು ಮುಗಿಸಲು ಯೋಜಿಸಲಾಗಿದೆ’ ಎಂದರು.

ತ್ವರಿತ ವಿಲೇವಾರಿ: ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿರುವ ವಿವಿಧ ಪ್ರಕರಣಗಳನ್ನು ನಮ್ಮ ಸರ್ಕಾರವು ತ್ವರಿತವಾಗಿ ವಿಲೇವಾರಿ ಮಾಡಲಾಗಿದೆ. ತಹಶೀಲ್ದಾರ್‌ ಕೋರ್ಟಿನಲ್ಲಿ ನಾಲ್ಕೈದು ವರ್ಷದಿಂದ ವಿಲೇವಾರಿಯಾಗದೆ ಉಳಿದಿದ್ದ 10,774 ಪ್ರಕರಗಳಲ್ಲಿ ಶೇ.96ರಷ್ಟು ಪ್ರಕರಣಗಳನ್ನು ಇತ್ಯರ್ಥ್ಯಗೊಳಿಸಲಾಗಿದ್ದು, ಪ್ರಸ್ತುತ 620 ಪ್ರಕರಣ ಬಾಕಿ ಇವೆ. ಎಸಿ ನ್ಯಾಯಾಲಯದಲ್ಲಿ 68,857 ಪ್ರಕರಣಗಳು ಇದ್ದವು. ಈಗ 12,630 ಪ್ರಕರಣಗಳು ಬಾಕಿ ಉಳಿದಿವೆ. ಹಿಂದಿನ ಸರ್ಕಾರ ಐದು ವರ್ಷದಲ್ಲಿ ಎಂಟು ಸಾವಿರ ಪೋಡಿ ದುರಸ್ತಿಯನ್ನು ಮಾಡಿತ್ತು. ಆದರೆ, ನಾವು ಅಧಿಕಾರಕ್ಕೆ ಬಂದ ಬಳಿಕ ಈ ಕೆಲಸವನ್ನು ತ್ವರಿತವಾಗಿ ಮಾಡುತ್ತಿದ್ದೇವೆ. ಈ ವರ್ಷದ ಜನವರಿಯಿಂದ ಅಕ್ಟೋಬರ್‌ವರೆಗೆ 1.40 ಲಕ್ಷ ಪೋಡಿ ದುರಸ್ತಿ ಮಾಡಲಾಗಿದೆ ಎಂದರು.

ಪರಿಹಾರ: ಕೇಂದ್ರಕ್ಕೆ ಮನವಿ ಸಿದ್ಧ

‘ಮುಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ನಷ್ಟಕ್ಕೆ ಪರಿಹಾರವನ್ನು ನೀಡಲು ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ ಅಡಿಯಲ್ಲಿ ₹1545 ಕೋಟಿ ನೀಡಬೇಕು ಎಂದು ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಪತ್ರ ಸಿದ್ಧಪಡಿಸಿಕೊಂಡಿದೆ. ಕೇಂದ್ರದ ಗೃಹ ಸಚಿವರ ಭೇಟಿಗೆ ಸಮಯ ನಿಗದಿಯಾದರೆ ಮುಖ್ಯಮಂತ್ರಿಯವರು ಮನವಿ ಸಲ್ಲಿಸುತ್ತಾರೆ’ ಎಂದು ಕೃಷ್ಣಬೈರೇಗೌಡ ತಿಳಿಸಿದರು.

‘2023– 24ನೇ ಸಾಲಿನಲ್ಲಿ ಬರಗಾಲದ ಕಾರಣಕ್ಕೆ ಪರಿಹಾರ ಕೇಳಲಾಗಿತ್ತು. ನಾಲ್ಕೈದು ಬಾರಿ ಭೇಟಿ ನೀಡಿದಾಗಲೂ ಸಕಾರಾತ್ಮಕ ಸ್ಪಂದನೆ ನೀಡದಿದ್ದಾಗ ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರದ ಹಣವನ್ನು ರೈತರಿಗೆ ವಿತರಿಸಲಾಯಿತು. ಈ ಬಾರಿಯಾದರೂ ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ಸಲ್ಲಬೇಕಾದ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು. ‘ರಾಜ್ಯದಲ್ಲಿ 14.58 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 14 ರೈತರು ಸಂತ್ರಸ್ತರಾಗಿದ್ದಾರೆ. ಇವರಿಗೆ ₹2798 ಕೋಟಿ ಪರಿಹಾರ ನೀಡಬೇಕಾಗಿದೆ. ಈಗಾಗಲೇ ಪರಿಹಾರ ನೀಡುವ ಕಾರ್ಯ ಚಾಲ್ತಿಯಲ್ಲಿದೆ. ಪರಿಹಾರ ಬಾರದ ಕೆಲವು ಜಿಲ್ಲೆಗಳಿಗೆ ಇನ್ನೊಂದು ವಾರದಲ್ಲಿ ವಿತರಣೆ ಮಾಡುವ ಕೆಲಸ ಮಾಡಲಾಗುತ್ತದೆ. ಈ ಹಣವನ್ನು ರಾಜ್ಯ ಸರ್ಕಾರದ ಎಸ್‌ಟಿಆರ್‌ಎಫ್‌ ನಿಧಿಯಿಂದ ನೀಡಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.