ಮೈಸೂರು: ‘ವಿಶ್ವ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ ಪ್ರಸಿದ್ಧಿ ಪಡೆಯಲು ಸಾಹಿತ್ಯ ಹಾಗೂ ಸಂಗೀತ ಪ್ರಮುಖ ಪಾತ್ರ ವಹಿಸಿದೆ’ ಎಂದು ಆಕಾಶವಾಣಿ ನಿವೃತ್ತ ಸಹಾಯಕ ನಿರ್ದೇಶಕಿ ರಾಜಲಕ್ಷ್ಮಿ ಶ್ರೀಧರ್ ತಿಳಿಸಿದರು.
ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದಿಂದ ನಗರದ ನಮನ ಕಲಾ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಡಿ.ಎಲ್.ವಿಜಯಕುಮಾರಿ ಸ್ಮರಣಾರ್ಥ ‘ಕಾವ್ಯ ದಸರಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತೀಯ ಸಾಹಿತ್ಯಕ್ಕೆ ಕನ್ನಡ ಭಾಷೆಯ ಕೊಡುಗೆ ಗಮನಾರ್ಹವಾದದ್ದು. ಇದು ನಮ್ಮ ಹೆಮ್ಮೆ. ಶ್ರೀಮಂತಿಕೆಯಿಂದ ಕೂಡಿರುವ ಕನ್ನಡ ಭಾಷೆಯಲ್ಲಿ ಪದಗಳಿಗೆ ಕೊರತೆಯಿಲ್ಲ. ಶಬ್ದಗಳನ್ನು ಅರ್ಥವತ್ತಾಗಿ ಬಳಸಿದಾಗ ಮಾತ್ರ ಕಾವ್ಯಕ್ಕೆ ಮಹತ್ವ ಸಿಗುತ್ತದೆ. ಈ ನಿಟ್ಟಿನಲ್ಲಿ ಕವಿಗಳು ಕಾವ್ಯ ರಚನೆಯಲ್ಲಿ ತೊಡಗಬೇಕು’ ಎಂದು ಸಲಹೆ ನೀಡಿದರು.
ಪ್ರಶಸ್ತಿ ಪ್ರದಾನ: ಸಿ.ತೇಜೋವತಿ ಅವರಿಗೆ ‘ಡಿ.ಎಲ್.ವಿಜಯಕುಮಾರಿ ಸಾಧನಾ ಪ್ರಶಸ್ತಿ’, ಕೆ.ಟಿ.ಶ್ರೀಮತಿ ಅವರಿಗೆ ‘ದಸರೆಯ ಕವಿ ಪ್ರಶಸ್ತಿ’, ಅತಿಶಯ್ ಜೈನ್ ಹಾಗೂ ಸುಶ್ಮಿತಾ ಅವರಿಗೆ ‘ದಸರಾ ಯುವ ಪ್ರತಿಭೆ ಪ್ರಶಸ್ತಿ’, ಮ.ವಿ.ರಾಮಪ್ರಸಾದ್, ಶಾರದಾ ಅಂಚನ್, ಆರ್.ಸಿ.ರಾಜಲಕ್ಷ್ಮಿ, ಚೂಡಾಮಣಿ, ಆರ್.ಕೃಷ್ಣಮೂರ್ತಿ, ಆರ್.ಕೃಷ್ಣ ಮೈಸೂರು, ಪ್ರಕಾಶ್ ಬಾಬು, ನಂಜನಗೂಡು ಸತ್ಯನಾರಾಯಣ ಅವರಿಗೆ ‘ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಂಗೀಪುರ ನಂಬೀಮಠದ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕಿ ಉಷಾ ನರಸಿಂಹನ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜ, ವಿಜ್ಞಾನ ಲೇಖಕ ಎಸ್.ರಾಮಪ್ರಸಾದ್, ಪತ್ರಕರ್ತ ರಂಗನಾಥ್ ಮೈಸೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.