ಮೈಸೂರು: ನಗರದ ಹೊರವಲಯದ ಲಿಂಗಾಂಬುಧಿಪಾಳ್ಯದ ಸಮೀಪ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರದ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ರಿಂಗ್ರಸ್ತೆಯ ಆಸುಪಾಸಿನಲ್ಲಿ ಬಿಗಿಭದ್ರತೆ ಕೈಗೊಂಡಿದ್ದಾರೆ.
ಮದ್ಯದಂಗಡಿಗಳ ಮೇಲೆ ವಿಶೇಷ ನಿಗಾ ಇರಿಸಿ ಅವು ನಿಗದಿತ ಸಮಯದೊಳಗೆ ಬಾಗಿಲು ಮುಚ್ಚುವಂತೆ ನೋಡಿಕೊಳ್ಳುತ್ತಿದ್ದಾರೆ. ರಸ್ತೆಬದಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುವವರನ್ನು 8 ಗಂಟೆಯ ಒಳಗೆ ಬಾಗಿಲು ಮುಚ್ಚಿಸುತ್ತಿದ್ದಾರೆ.
ರಸ್ತೆ ಬದಿ ಮದ್ಯ ಸೇವಿಸುವವರನ್ನು ವಶಕ್ಕೆ ತೆಗೆದುಕೊಂಡು ಎಚ್ಚರಿಕೆ ನೀಡಲಾಗುತ್ತಿದೆ. ಅನುಮಾನಾಸ್ಪದವಾಗಿ ಓಡಾಡುವವರ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಸಂಜೆಯ ನಂತರ ಅರ್ಧಗಂಟೆಗೆ ಒಮ್ಮೆಯಂತೆ ಗಸ್ತು ವಾಹನಗಳು ಸಂಚರಿಸುತ್ತಿವೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ಅನಾವಶ್ಯಕವಾಗಿ ಸಾರ್ವಜನಿಕರು ನಗರದ ಹೊರವಲಯದ ನಿರ್ಜನ ಪ್ರದೇಶಗಳಲ್ಲಿ ಓಡಾಡಬಾರದು. ಕಿಡಿಗೇಡಿಗಳು ಮದ್ಯ ಸೇವಿಸುತ್ತಾ ಕುಳಿತಿರುವುದು, ಜೂಜಾಟವಾಡುವುದು ಕಂಡು ಬಂದರೆ ತಕ್ಷಣವೇ ಪೊಲೀಸ್ ನಿಯಂತ್ರಣ ಕಚೇರಿ 100ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
4 ಮಂದಿ ಶಂಕಿತರ ವಿಚಾರಣೆ?
ಈ ಮಧ್ಯೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಪೊಲೀಸರು ದೃಢಪಡಿಸಿಲ್ಲ. ಆರೋಪಿಗಳ ಶೋಧ ಕಾರ್ಯದಲ್ಲಿ ಈಗಾಗಲೇ ಪೊಲೀಸರು ತೊಡಗಿದ್ದಾರೆ.
ಪ್ರಕರಣವು ಜಯಪುರ ಠಾಣೆಗೆ ಸೇರುವುದಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ನಗರ ಪೊಲೀಸ ಕಮೀಷನರೇಟ್ಗೆ ವರ್ಗಾಯಿಸಿದೆ. ಆದರೆ, ಇದೇ ವ್ಯಾಪ್ತಿಯಲ್ಲಿನ ಹಲವು ಪ್ರಕರಣಗಳನ್ನು ಜಯಪುರ ಠಾಣೆಯ ಪೊಲೀಸರೇ ದಾಖಲಿಸಿಕೊಂಡಿದ್ದಾರೆ. ಆದರೆ, ಈ ಒಂದು ಪ್ರಕರಣ ಮಾತ್ರ ಕುವೆಂಪುನಗರಕ್ಕೆ ಹಸ್ತಾಂತರಿಸಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಎಡೆ ಮಾಡಿದೆ. ‘ಒಂದು ವೇಳೆ ಏನಾದರು ತೊಂದರೆಯಾದರೆ ನಾವು ಯಾವ ಠಾಣೆಯನ್ನು ಸಂಪರ್ಕಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ಸಾರ್ವಜನಿಕರೊಬ್ಬರು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.