ADVERTISEMENT

ಜಿಲ್ಲೆಯಲ್ಲಿ 29 ರೌಡಿಗಳ ಗಡಿಪಾರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:35 IST
Last Updated 10 ಏಪ್ರಿಲ್ 2019, 17:35 IST

ಮೈಸೂರು: ಜಿಲ್ಲೆಯಲ್ಲಿ 29 ರೌಡಿಗಳನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಕೆ.ಆರ್.ನಗರ ತಾಲ್ಲೂಕಿನಲ್ಲಿ 8, ತಿ.ನರಸೀಪುರದಲ್ಲಿ 7, ಮೈಸೂರು ತಾಲ್ಲೂಕಿನಲ್ಲಿ 4, ನಂಜನಗೂಡು ಮತ್ತು ಹುಣಸೂರಿನಲ್ಲಿ ತಲಾ 3, ಪಿರಿಯಾಪಟ್ಟಣ ಹಾಗೂ ಎಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ತಲಾ ಇಬ್ಬರು ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರು ಇವರನ್ನು ಗಡಿಪಾರು ಮಾಡಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇವರು ಅಹಿತಕರ ಘಟನೆಗಳನ್ನು ನಡೆಸುವ ಸಾಧ್ಯತೆಗಳಿವೆ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಹೀಗಾಗಿ, ಜಿಲ್ಲಾಧಿಕಾರಿ ರೌಡಿಗಳನ್ನು ಗಡಪಾರು ಮಾಡಿದ್ದಾರೆ.

ADVERTISEMENT

ಬಾಲಕಿ ಮೇಲೆ ಅತ್ಯಾಚಾರ; 10 ವರ್ಷ ಕಠಿಣ ಶಿಕ್ಷೆ
ಜಿಲ್ಲೆಯ ತಾಲ್ಲೂಕುವೊಂದರಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 35 ವರ್ಷದ ಆರೋಪಿಯೊಬ್ಬನಿಗೆ ಇಲ್ಲಿನ ಪೊಕ್ಸೊ ವಿಶೇಷ ನ್ಯಾಯಾಲಯವು 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಅತ್ಯಾಚಾರದಿಂದ ಬಾಲಕಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು.

ಅಂಗವಿಕಲ ಮಗುವಿಗೆ ತಾಯಿಯಾಗಿದ್ದಕ್ಕೆ ಕೊಲೆ; ಪತಿಗೆ ಜೀವಾವಧಿ ಶಿಕ್ಷೆ
ಅಂಗವಿಕಲ ಮಗು ಹುಟ್ಟಿತೆಂದು ಪತ್ನಿಯ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿ ಕೊಲೆ ಮಾಡಿದ ಆರೋಪಿ ನಂಜನಗೂಡಿನ ಹದಿನಾರು ಗ್ರಾಮದ ದೊರೆಸ್ವಾಮಿ (45) ಎಂಬಾತನಿಗೆ ಇಲ್ಲಿನ 5ನೇ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹ 35 ಸಾವಿರ ದಂಡ ವಿಧಿಸಿದೆ.

ದೊರೆಸ್ವಾಮಿ ತನ್ನ ಸೋದರತ್ತೆಯ ಮಗಳು ಮಂಗಳಮ್ಮ (35) ಎಂಬಾಕೆಯನ್ನು 18 ವರ್ಷಗಳ ಹಿಂದೆ ವಿವಾಹವಾಗಿದ್ದ. ಅಂಗವಿಕಲ ಮಗು ಹುಟ್ಟಿತೆಂದು 2013ರ ಮೇ 1ರಂದು ಈತ ತನ್ನ ತಾಯಿ ಜಯಮ್ಮ ಹಾಗೂ ಸೋದರ ನಾಗರಾಜು ಜತೆ ಸೇರಿಕೊಂಡು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ತೀವ್ರವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದ ಮಂಗಳಮ್ಮ ಅವರು ಅಂಬುಲೆನ್ಸ್‌ನಲ್ಲಿ ಈ ವಿಷಯವನ್ನು ತನ್ನ ಸೋದರನಿಗೆ ತಿಳಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕುರುವತ್ತಿ ಅವರು ದೊರೆಸ್ವಾಮಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಪ್ರಕರಣದ ಮತ್ತಿಬ್ಬರು ಆರೋಪಿಗಳಾದ ಜಯಮ್ಮ ತಲೆಮರೆಸಿಕೊಂಡಿದ್ದರೆ, ನಾಗರಾಜು ಈಗಾಗಲೇ ಮೃತಪಟ್ಟಿದ್ದಾರೆ.

ಸರ್ಕಾರದ ಪರವಾಗಿ ಎಚ್.ಡಿ.ಆನಂದಕುಮಾರ್ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.