ADVERTISEMENT

9 ಸಾಗುವಾನಿ ಮರ ಕಳವು

ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 3:58 IST
Last Updated 19 ಏಪ್ರಿಲ್ 2019, 3:58 IST
ಎಚ್.ಡಿ.ಕೋಟೆ ತಾಲ್ಲೂಕಿನ ಸೋರೆಕುಪ್ಪೆ ಬೀಟ್‌ನಲ್ಲಿ ಮರ ಕತ್ತರಿಸಿರುವುದನ್ನು ನಾರಾಣಯಣಸ್ವಾಮಿ ಪರಿಶೀಲಿಸಿದರು
ಎಚ್.ಡಿ.ಕೋಟೆ ತಾಲ್ಲೂಕಿನ ಸೋರೆಕುಪ್ಪೆ ಬೀಟ್‌ನಲ್ಲಿ ಮರ ಕತ್ತರಿಸಿರುವುದನ್ನು ನಾರಾಣಯಣಸ್ವಾಮಿ ಪರಿಶೀಲಿಸಿದರು   

ಎಚ್.ಡಿ.ಕೋಟೆ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಕುಪ್ಪೆ ವನ್ಯಜೀವಿ ವಲಯದ ಸೋರೆಕುಪ್ಪೆ ಬೀಟ್‌ನ ಕಲ್ಲಹಳ್ಳ– ಗುಡಿಹಳ್ಳದ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ 9 ಸಾಗುವಾನಿ ಮರಗಳನ್ನು ಕಳವು ಮಾಡಲಾಗಿದೆ.

ಸ್ಥಳಕ್ಕೆ ಮುಖ್ಯ ಅರಣ್ಯಾಧಿಕಾರಿ ನಾರಾಯಣಸ್ವಾಮಿ, ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ 8 ರಿಂದ 10 ಅಡಿ ಉದ್ದದ 2ರಿಂದ 3 ಅಡಿ ಸುತ್ತಳತೆಯ 8 ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಮರಗಳ್ಳರು ಒಣಗಿದ್ದ 9 ಸಾಗುವಾನಿ ಮರಗಳನ್ನು ಕತ್ತರಿಸಿ ಸಾಗಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಆದರೆ, ಮರಗಳ್ಳರನ್ನು ಬಂಧಿಸಲು ಸಾಧ್ಯವಾಗಿಲ್ಲ. ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಪ್ರಕರಣದಲ್ಲಿ ಇಲಾಖೆಯ ಕೆಲವರ ಕೈವಾಡ ಇದೆ ಎಂದು ಶಂಕಿಸಲಾಗಿದೆ ಎಂದು ನಾರಾಯಣಸ್ವಾಮಿ ತಿಳಿಸಿದರು.

ADVERTISEMENT

‘ಪ್ರಕರಣದ ತನಿಖೆ ನಡೆಸುವಂತೆ ಅಂತರಸಂತೆ ವನ್ಯಜೀವಿ ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ಆದೇಶ ಕೊಟ್ಟಿದ್ದೇನೆ. ಇಲಾಖೆಯವರು ಶಾಮೀಲಾಗಿದ್ದರೆ ಅವರನ್ನು ಸೇವೆಯಿಂದ ಅಮಾನತು ಮಾಡಲಾಗುವುದು’ ಎಂದು ಹೇಳಿದರು.

ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ಮರಗಳ್ಳತನವಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆ ವಹಿಸುತ್ತಿಲ್ಲ. ಕಳ್ಳ ಬೇಟೆ ತಡೆ ಶಿಬಿರಗಳು ಕೂಡ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಕಳ್ಳಕಾಕರಿಗೆ ಮರ ಕಡಿಯಲು ಅನುಕೂಲವಾಗಿದೆ ಎಂದು ಪರಿಸರ ಪ್ರೇಮಿ ಹೇಮಂತ್ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಇರುವ ಸಾಮಿಲ್ ಮಾಲೀಕರ ಕೈವಾಡ ಇರಬಹುದು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

20 ದಿನಗಳ ಹಿಂದೆ ಮೇಟಿಕುಪ್ಪೆ ವನ್ಯಜೀವಿ ವಲಯದ ಅಗಸನಹುಂಡಿ ವಿಭಾಗದಲ್ಲಿ 6 ಸಾಗುವಾನಿ ಮರಗಳನ್ನು ಕಳವು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.