ಸಾಲಿಗ್ರಾಮ: ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಬನ್ನಮಹಾಕಾಳಿಯಮ್ಮ ದೇವಿಯ ದೇವಾಲಯದ 38ನೇ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಎರಡು ದಿನಗಳಿಂದ ದೇವಾಲಯಲ್ಲಿ ಅರ್ಚಕ ಸೆಲ್ವನ್ ಅವರ ಮಾರ್ಗದರ್ಶನದಲ್ಲಿ ದೇವಿಗೆ ವಿಶೇಷ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು.
ಚುಂಚನಕಟ್ಟೆ ಗ್ರಾಮದ ಹೊರವಲಯದಲ್ಲಿ ಇರುವ ಕಾವೇರಿ ನದಿಯಲ್ಲಿ ಬನ್ನಮಹಾಕಾಳಿಯಮ್ಮನ ಉತ್ಸವ ಮೂರ್ತಿಯನ್ನು ಶುದ್ಧೀಕರಿಸಿದ ನಂತರ ಪಲ್ಲಕ್ಕಿ ಉತ್ಸವನ್ನು ದೇವಾಲಯಕ್ಕೆ ತರಲಾಯಿತು. ನಂತರ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಪಲ್ಲಕ್ಕಿ ಉತ್ಸವ ತರುವ ವೇಳೆ ನೂರಾರು ಮಹಿಳೆಯರು ಪೂರ್ಣಕುಂಬದೊಂದಿಗೆ ಬರ ಮಾಡಿಕೊಂಡರು.
ದೇವಿಯ ದರ್ಶನ ಪಡೆಯಲು ಆಗಮಿಸಿದ ಭಕ್ತರಿಗೆ ಸಮಿತಿ ವತಿಯಿಂದ ಪ್ರಸಾದ ವಿತರಣೆ ಮಾಡಲಾಯಿತು. ಅಲ್ಲದೆ ಸಾವಿರಾರು ಭಕ್ತರಿಗೆ ಮಧ್ಯಾಹ್ನ ‘ಅನ್ನಸಂತರ್ಪಣೆ’ ಏರ್ಪಡಿಸಲಾಗಿತ್ತು. ಸಂಜೆ ಚುಂಚನಕಟ್ಟೆ ಗ್ರಾಮದ ಬೀದಿಗಳಲ್ಲಿ ಬನ್ನಮಹಾಕಾಳಿಯಮ್ಮನ ಉತ್ಸವ ಮೂರ್ತಿಯನ್ನು ಹೊತ್ತು ಬರುವ ವೇಳೆ ಭಕ್ತರು ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.