
ಸರಗೂರು: ಇಲ್ಲಿನ ಮೊಳೆಯೂರಿನಲ್ಲಿ ಹಳೆ ವೈಷಮ್ಯಕ್ಕೆ ರಮೇಶ್ ಆಲಿಯಾಸ್ ಕರಿಯಪ್ಪ (33) ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದೆ.
ಸ್ನೇಹಿತ ಅನುರಾಜ್ ಬಿನ್ ಪುಟ್ಟರಾಜು ಎಂಬಾತ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಜೋರಾಗಿ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆ ವಿವರ: ಬುಧವಾರ ತಡರಾತ್ರಿ ಸಮೀಪದ ರಾಗಿ ಜಮೀನಿನಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಕಾವಲು ಕಾಯುವಾಗ ರಮೇಶ್ ಎಂಬಾತ ಅನುರಾಜ್ಗೆ ಪೋನ್ ಕರೆ ಮಾಡಿದ್ದು, ಈ ನಡುವೆ ಮತ್ತೆ ಜೋರಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಅನುರಾಜ್ ಅಟ್ಟಣೆಯಲ್ಲಿ ಮಲಗಿರುವಾಗ ರಮೇಶ್ ಜಮೀನಿನ ಬಳಿ ಹೋಗಿ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ಸಂದರ್ಭ ರಮೇಶ್ನಿಗೆ ಚಾಕು ಇರಿತಗೊಂಡಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಳದಂಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜು, ವೃತ್ತ ನೀರಿಕ್ಷಕ ಪ್ರಸನ್ನ, ಉಪ ನೀರಿಕ್ಷಕ ಆರ್.ಕಿರಣ್, ಸಿಬ್ಬಂದಿಗಳಾದ ಮಹಮದ್ ಇಮ್ರಾನ್, ಆನಂದ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.