ADVERTISEMENT

ಸಾರ್ವಜನಿಕ ಉದ್ದಿಮೆ ಉಳಿಸಲು ಕರೆ

ಬೆಳಿಗ್ಗೆ 6.30ರಿಂದಲೇ ತಮಟೆ ಚಳವಳಿ ಆರಂಭ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 18:45 IST
Last Updated 15 ಅಕ್ಟೋಬರ್ 2019, 18:45 IST
ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಲು ಆಗ್ರಹಿಸಿ ನೂರಾರು ಮಂದಿ ಬೆಮಲ್ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ತಮಟೆ ಚಳವಳಿ ನಡೆಸಿದರು.
ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಲು ಆಗ್ರಹಿಸಿ ನೂರಾರು ಮಂದಿ ಬೆಮಲ್ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ತಮಟೆ ಚಳವಳಿ ನಡೆಸಿದರು.   

ಮೈಸೂರು: ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಲು ಆಗ್ರಹಿಸಿ ನೂರಾರು ಮಂದಿ ಬೆಮಲ್ ಕಾರ್ಮಿಕರು ಕಾರ್ಖಾನೆಯ ಆವರಣದಲ್ಲಿ ಮಂಗಳವಾರ ತಮಟೆ ಚಳವಳಿ ನಡೆಸಿದರು.

ಭಾರತ್ ಅರ್ಥ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬೆಳಿಗ್ಗೆ 6.30ಕ್ಕೆ ಸೇರಿದ 500ಕ್ಕೂ ಹೆಚ್ಚು ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೇಂದ್ರವು ಬೆಮಲ್ ಕೈಗಾರಿಕೆಯಿಂದ ಬಂಡವಾಳ ವಾಪಸ್ ತೆಗೆದುಕೊಳ್ಳುತ್ತಿದೆ. ಈ ಮೂಲಕ ಕಾರ್ಖಾನೆಯನ್ನು ಅದು ಖಾಸಗೀಕರಣಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಪ್ರತಿಭಟನಾಕಾರರು ಹರಿಹಾಯ್ದರು.

ADVERTISEMENT

ಕಳೆದ 50 ವರ್ಷಗಳಿಂದ ಈ ಕೈಗಾರಿಕೆಯು ಸತತ ಲಾಭ ಗಳಿಸಿದೆ. ಲಾಭದ ಹಳಿಯ ಮೇಲಿರುವ ಇಂತಹ ಕೈಗಾರಿಕೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡುವ ಮೂಲಕ ಲಾಭವು ಕೆಲವೇ ವ್ಯಕ್ತಿಗಳಿಗೆ ದಕ್ಕುವಂತೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ದೇಶದ ಅಭಿವೃದ್ಧಿಯಲ್ಲಿ ಬೆಮಲ್ ಕೈಗಾರಿಕೆಯ ಪಾಲೂ ದೊಡ್ಡದಿದೆ. ಇಂತಹ ಮಹತ್ವದ ಕೈಗಾರಿಕೆಯಿಂದ ಸರ್ಕಾರ ಬಂಡವಾಳವನ್ನು ವಾಪಸ್ ತೆಗೆದುಕೊಳ್ಳುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಕಾರ್ಮಿಕರು, ಅಧಿಕಾರಿ ವರ್ಗದವರು, ಗುತ್ತಿಗೆ ಕಾರ್ಮಿಕರು ಪ್ರತಿಭಟನೆಯಲ್ಲಿದ್ದರು.

ಕಸಾಯಿಖಾನೆ ವಿರೋಧಿಸಿ ಪ್ರತಿಭಟನೆ

ಇಲ್ಲಿನ ಕೆಸರೆಯಲ್ಲಿ ಕಸಾಯಿಖಾನೆ ಸ್ಥಾಪಿಸಬಾರದು ಎಂದು ಆಗ್ರಹಿಸಿ ಪಾಲಿಕೆ ವಿರುದ್ಧ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕಸಾಯಿ ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ ಸಾರ್ವಜನಿಕರು ಮೈಸೂರು ಮಹಾನಗರ ಪಾಲಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೆಸರೆಯಲ್ಲಿರುವ ಪಾಲಿಕೆಯ ಒಣಕಸ ಹಸಿಕಸ ವಿಂಗಡಣೆ ಸ್ಥಳದಲ್ಲಿ ಸೇರಿದ ಪ್ರತಿಭಟನಾಕಾರರು ಪಾಲಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಬಂದ ಪಾಲಿಕೆಯ ವಲಯ ಅಧಿಕಾರಿಯನ್ನು ಅವರು ತರಾಟೆಗೆ ತೆಗೆದುಕೊಂಡರು. ಇಲ್ಲಿ ಯಾವುದೇ ಕಾರಣಕ್ಕೂ ಕಸಾಯಿಖಾನೆ ಬೇಡ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.