ಮೈಸೂರು: ನಗರದ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡದವರು ಅಮೃತ ವಿಶ್ವವಿದ್ಯಾಪೀಠಂ ಆಯೋಜಿಸಿದ್ದ ‘ಸದ್ಗಮಯ-2022’ ಅಂತರಕಾಕಾಲೇಜು ಉತ್ಸವದಲ್ಲಿ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಗಾಯಕ, ಚಲನಚಿತ್ರ ಸಂಗೀತ ಸಂಯೋಜಕ ವಾಸುಕಿ ವೈಭವ್ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿ, ‘ಜೀವನದಲ್ಲಿ ದೊಡ್ಡ ಕನಸುಗಳನ್ನು ಇಟ್ಟುಕೊಂಡು ಅದನ್ನು ನನಸಾಗಿಸಲು ಶ್ರಮಿಸಬೇಕು. ಗುರಿಯತ್ತ ಮುನ್ನಡೆಯುವುದು ತುಂಬಾ ಅಗತ್ಯ’ ಎಂದರು.
‘ಕಲಾವಿದರ ಜೀವನದಲ್ಲಿ ವೇದಿಕೆ, ಚಪ್ಪಾಳೆ, ಅಭಿಮಾನ ಎನ್ನುವುದು ದೊಡ್ಡ ವಿಷಯಗಳು. ಅವುಗಳ ಮಹತ್ವವನ್ನು ಕೋವಿಡ್ ಹಾಗೂ ಕೋವಿಡ್ ನಂತರದ ಜೀವನ ತಿಳಿಸಿದೆ’ ಎಂದು ಹೇಳಿದರು.
ಕಾಲೇಜಿನ ಕಂಪ್ಯೂಟರ್ ಸೈನ್ಸ್, ದೃಶ್ಯ ಸಂವಹನ, ವಿಜ್ಞಾನ, ಭಾಷಾ ವಿಭಾಗ ಹಾಗೂ ದೈಹಿಕ ಶಿಕ್ಷಣ ವಿಭಾಗಗಳಿಂದ ಆಯೋಜನೆಗೊಂಡಿದ್ದ ಉತ್ಸವದಲ್ಲಿ ಹಲವು ಸ್ಪರ್ಧೆಗಳು ನಡೆದವು. ವಿವಿಧ 25 ಕಾಲೇಜುಗಳ 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತ್ಯುತ್ತಮ ಕಾರ್ಯನಿರ್ವಾಹಕ ಅಧಿಕಾರಿ, ಪೈಸೋ ಕಾ ಖೇಲ್, ಶಿಪ್ರೆಕ್, ಭಗವದ್ಗೀತೆ ಪಠಣ, ವೇದ ಪಠಣ, ಡೆಕ್ಸ್ಟ್ರಾಯ್, ಅಣಕು ನ್ಯಾಯಾಲಯ, ಬ್ರೈನ್ಝೀ, ಕಾಲ್ ಆಫ್ ಡ್ಯುಟಿ- ಮೊಬೈಲ್ ಗೇಮಿಂಗ್, ರೋಡೀಜ್, ಕ್ಯಾಮೆರಾ ಆಬ್ಸ್ಕುರಾ, ಆರ್ಜೆ ಹಂಟ್, ನ್ಯುಮರೋ ಉನೋ, ಸೈ ಹಬ್ ಶೀರ್ಷಿಕೆಯಲ್ಲಿ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ವಿತರಿಸಲಾಯಿತು. ವೈಜ್ಞಾನಿಕವಾಗಿ ಸಿದ್ಧಪಡಿಸಲಾದ ಸೈನ್ಸ್ ಪಾರ್ಕ್ ವಿಜ್ಞಾನ ಲೋಕದ ಅದ್ಭುತಗಳನ್ನು ಪರಿಚಯಿಸಿತು. ಫ್ಯಾಷನ್ ಷೋ, ನೃತ್ಯ ಹಾಗೂ ಮ್ಯೂಸಿಕ್ ಬ್ಯಾಂಡ್ ಕಾರ್ಯಕ್ರಮವೂ ನಡೆಯಿತು.
ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ನಿರ್ದೇಶಕ ಅನಂತಾನಂದ ಚೈತನ್ಯ, ಪ್ರಾಂಶುಪಾಲ ಡಾ.ಜಿ. ರವೀಂದ್ರನಾಥ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.