ಮೈಸೂರು: ‘ದೇಶದ ಸಂವಿಧಾನವು ಅಪಾಯದಲ್ಲಿದ್ದು, ಗಣತಂತ್ರ ವ್ಯವಸ್ಥೆಯ ರಕ್ಷಣೆಯಲ್ಲಿ ವಿದ್ಯಾರ್ಥಿ ಸಂಘಟನೆಗಳ ಪಾತ್ರ ಪ್ರಮುಖವಾಗಿದೆ’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಹೇಳಿದರು.
ಬುದ್ಧ ವಿಹಾರದಲ್ಲಿನ ಸಭಾಂಗಣದಲ್ಲಿ ಶನಿವಾರ ನಡೆದ ಭಾರತ ವಿದ್ಯಾರ್ಥಿ ಫೆಡರೇಶನ್ನ (ಎಸ್ಎಫ್ಐ) 12ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಹಲವು ಸಂಘಟನೆಗಳಿವೆ. ಎಬಿವಿಪಿ ಬರೀ ಹಣೆ ಮೇಲೆ ನಾಮ ಇಡುವುದಕ್ಕೆ ಸೀಮಿತವಾಗಿದೆ. ಸಮಾಜವಾದ ಎಂದರೆ ಅವರಿಗೆ ಆಗದು. ಆರ್ಎಸ್ಎಸ್ನವರು ಗಣಪತಿಗೇ ಚಡ್ಡಿ ಹಾಕಿದ್ದಾರೆ. ಆದರೆ, ಅದೇ ಚಡ್ಡಿಯನ್ನು ಹೆಣ್ಣು ಮಕ್ಕಳು ಹಾಕಿದರೆ ಅವರಿಗೆ ಕಷ್ಟ. ಮಂಗಳೂರಿನಂತಹ ನಗರಗಳಲ್ಲಿ ವಿದ್ಯಾರ್ಥಿಗಳ ಸ್ನೇಹಕ್ಕೆ ಲವ್ ಜಿಹಾದ್ ಪಟ್ಟ ಕಟ್ಟಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘21 ವರ್ಷದ ಒಳಗೆ ನೀವು ಏನಾದರೂ ಸಾಧಿಸದೇ ಇದ್ದಲ್ಲಿ ಸಮಾಜ ನಿಮ್ಮನ್ನು ಗುರುತಿಸುವುದು ಕಷ್ಟ. ವಿದ್ಯಾರ್ಥಿಗಳು ಬದಲಾವಣೆಗೆ ಮನಸ್ಸು ಮಾಡಬೇಕು. ದೇಶದಲ್ಲಿನ ಆಗುಹೋಗುಗಳಿಗೆ ಸ್ಪಂದಿಸಬೇಕು. ತಪ್ಪನ್ನು ವಿರೋಧಿಸುವ ಮನೋಭಾವವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು. ಸಾಮಾಜಿಕ ಹಾಗೂ ರಾಜಕೀಯವಾಗಿ ಬದಲಾವಣೆ ತರಬೇಕು’ ಎಂದು ಸಲಹೆ ನೀಡಿದರು.
ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಸ್. ವಿಜಯ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಭೀಮನಗೌಡ, ವಿದ್ಯಾರ್ಥಿ ಉಪಸಮಿತಿ ನಾಯಕಿ ಎಂ.ಎನ್. ದೀಕ್ಷಿತಾ ಇದ್ದರು.
ಕಾರ್ಯಕ್ರಮದಲ್ಲಿ 25 ಸದಸ್ಯರ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಟಿ.ಎಸ್. ವಿಜಯ್ ಕುಮಾರ್ ( ಜಿಲ್ಲಾ ಅಧ್ಯಕ್ಷ) ಟಿ. ಪ್ರಜ್ವಲ್ (ಕಾರ್ಯದರ್ಶಿ) ದೀಕ್ಷಿತಾ ರಜಿಯಾ ಯಾಸ್ಮಿನ್ ಸಂಜು (ಉಪಾಧ್ಯಕ್ಷರು) ಚಿರಾಗ್ ಸಂತೋಷ್ ಮಂಜುನಾಥ್ (ಜಂಟಿ ಕಾರ್ಯದರ್ಶಿಗಳು) ಆಯ್ಕೆಯಾದರು. ಸಂಘಟನೆ ಪದಾಧಿಕಾರಿಗಳಾದ ಡಿ. ಅಭಿ ಎಸ್.ಕೆ. ಚಿರಾಗ್ ವಿನಾಯಕ್ ಜೀವನ್ ಸಂತೋಷ್ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ರಾಮಸ್ವಾಮಿ ವೃತ್ತದಿಂದ ಬುದ್ಧವಿಹಾರದವರೆಗೆ ವಿದ್ಯಾರ್ಥಿಗಳ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.