ಮೈಸೂರು: ನಗರದ ಊಟಿ ರಸ್ತೆಯಲ್ಲಿರುವ ಮಹಿಳೆಯರ ಪುನರ್ವಸತಿ ಕೇಂದ್ರ ‘ಶಕ್ತಿಧಾಮ’ದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಚಲನಚಿತ್ರ ನಟ ಶಿವರಾಜ್ ಕುಮಾರ್– ಗೀತಾ ದಂಪತಿ ಹಾಗೂ ಉಪೇಂದ್ರ ಪಾಲ್ಗೊಂಡು ಸಡಗರ ಹೆಚ್ಚಿಸಿದರು.
ನಟ ಉಪೇಂದ್ರ ಮಾತನಾಡಿ, ‘ಪಾರ್ವತಮ್ಮ ರಾಜ್ಕುಮಾರ್ ಅವರು ಸ್ಥಾಪಿಸಿದ ಶಕ್ತಿಧಾಮದಲ್ಲಿ ಓದುತ್ತಿರುವವರೆಲ್ಲರೂ ಶಕ್ತಿಯನ್ನು ಪಡೆದು ಎಲ್ಲರಿಗೂ ಶಕ್ತಿ ನೀಡುವಂತೆ ಎತ್ತರಕ್ಕೆ ಬೆಳೆಯಬೇಕು’ ಎಂದು ಹೇಳಿದರು.
ಶಿವರಾಜ್ ಕುಮಾರ್, ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ನಿತ್ಯ ಸ್ಮರಿಸಬೇಕು. ಸಂವಿಧಾನ ಜಾರಿಯಾದ ದಿನವಾಗಿದೆ. ಅದರ ಅರಿವು ಎಲ್ಲರಿಗೂ ಇರಬೇಕು’ ಎಂದರು.
ಧ್ವಜಾರೋಹಣ ಮಾಡಿದ ಗೀತಾ ಶಿವರಾಜ್ ಕುಮಾರ್, ‘ಅಂಬೇಡ್ಕರ್ ಅವರು ವಿಶ್ವದ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಸಂವಿಧಾನ ಬದ್ಧವಾಗಿ ಎಲ್ಲರೂ ನಡೆದುಕೊಳ್ಳಬೇಕು. ಅದರ ಆಶಯಗಳನ್ನು ಎತ್ತಿ ಹಿಡಿಬೇಕು’ ಎಂದರು.
ಆಕರ್ಷಕ ಪಥ ಸಂಚಲನವು ಗಮನ ಸೆಳೆದರೆ, ಮಲ್ಲಕಂಬ ಪ್ರದರ್ಶನ, ಯೋಗ, ಭಾವೈಕ್ಯತೆ ಗೀತೆಗಳಿಗೆ ನೃತ್ಯ ಆಕರ್ಷಿಸಿತು. ವಿದ್ಯಾರ್ಥಿಗಳೇ ಹಾರ್ಮೋನಿಯಂ ಹಾಗೂ ವಾದ್ಯಗಳೊಂದಿಗೆ ’ಸಂವಿಧಾನ ಪ್ರಸ್ತಾವನೆ’ ಗೀತೆ ಹಾಡಿದರು. ಬ್ಯಾಂಡ್ ಪ್ರದರ್ಶನ, ದೇಶಭಕ್ತಿ ಗೀತೆ ಗಾಯನ, ಛದ್ಮವೇಷ ಹಾಗೂ ನೃತ್ಯ ಪ್ರದರ್ಶನಗಳು ಮೋಡಿ ಮಾಡಿದವು.
ವ್ಯವಸ್ಥಾಪಕ ಟ್ರಸ್ಟಿ ಸದಾನಂದ, ನಿರ್ದೇಶಕಿ ಮಂಜುಳಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.