ADVERTISEMENT

ನಾನು ಇಷ್ಟಪಡುತ್ತಿದ್ದ ಯುವ ರಾಜಕಾರಣಿ: ಶ್ರೀನಿವಾಸ ಪ್ರಸಾದ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:55 IST
Last Updated 11 ಮಾರ್ಚ್ 2023, 15:55 IST
   

ಮೈಸೂರು: ಆರ್.ಧ್ರುವನಾರಾಯಣ ನಿಧನಕ್ಕೆ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಕಂಬನಿ ಮಿಡಿದರು.

ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಮಾತನಾಡಿದ ಅವರು, ‘ನಾನು ನೋಡಿದಂತೆ ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ. ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಹಳ ಪ್ರಚಾರ ಮಾಡುತ್ತಿದ್ದರು. ತಲಾ ಎರಡು ಬಾರಿ ಲೋಕಸಭೆ ಹಾಗೂ ವಿಧಾನಸಭೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಘಟನೆಯಲ್ಲಿದ್ದು ಲವಲವಿಕೆಯಿಂದ ಇದ್ದರು. ಅವರ ಅಕಾಲಿಕ ನಿಧನ ದುಃಖ ತರಿಸಿದೆ’ ಎಂದರು.

‘ನಾಲ್ಕು ಚುನಾವಣೆ ಪೈಕಿ ಮೂರರಲ್ಲಿ ನಾನೇ ಮಾರ್ಗದರ್ಶನ ಮಾಡಿದ್ದೆ. ಗೆಲ್ಲಬೇಕು ಎಂದು ಬೆನ್ನಿಗೆ ಕಟ್ಟಿಕೊಂಡಿದ್ದೆ. ಅದಕ್ಕಿಂತ ಇನ್ನೇನು ಒಡನಾಟ ಬೇಕು? ಅವರಿಗೆ ಕೊಳ್ಳೇಗಾಲ ಗೊತ್ತಿರಲಿಲ್ಲ. ನಾನೇ ಅಭ್ಯರ್ಥಿ ಮಾಡಿ ಗೆಲ್ಲಿಸಿದ್ದೆ. ಎರಡು ಬಾರಿ ನಾನೇ ರಾಷ್ಟ್ರ ರಾಜಕಾರಣಕ್ಕೆ ಹೋಗಲೆಂದು ಸೋನಿಯಾ ಗಾಂಧಿ ಅವರ ಮನವೊಲಿಸಿ ಟಿಕೆಟ್ ಕೊಡಿಸಿದ್ದೆ. ಅವರ ಬಗ್ಗೆ ಅಷ್ಟು ಪ್ರೀತಿ, ವಿಶ್ವಾಸ ಇತ್ತು. ನಾನು ಬಹಳ ಇಷ್ಟಪಡುವ ಯುವ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಹಳ್ಳಿ ಹಳ್ಳಿಗೆ ಸುತ್ತುತ್ತಿದ್ದರು. ಯಾಕಿಷ್ಟು ಪ್ರಯಾಸ ಪಡುತ್ತಿದ್ದಾರೆ ಎಂದು ಹೇಳಿದ್ದೆ’ ಎಂದು ನೆನೆದರು.

ADVERTISEMENT

ಸೋನಿಯಾ ಕರೆ:

‘ತಂದೆ ಎಂದೂ ಕೂಡ ರಾಜಕಾರಣವನ್ನು ಕುಟುಂಬ ಸದಸ್ಯರ ಬಳಿಗೆ ತರಲಿಲ್ಲ. ರಾಜಕಾರಣದೊಂದಿಗೆ ಕುಟುಂಬದ ಕಡೆಗೂ ಗಮನ ನೀಡುತ್ತಿದ್ದರು. ಸೋನಿಯಾ ಗಾಂಧಿ ಅವರು ದೂರವಾಣಿ ಕರೆ ಮಾಡಿ ನಮಗೆ ಧೈರ್ಯ ತುಂಬಿದರು’ ಎಂದು ಧ್ರುವನಾರಾಯಣ ಪುತ್ರ ದರ್ಶನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.