ADVERTISEMENT

ಕಾಂಗ್ರೆಸ್ ಸಮಾವೇಶ | ಚರ್ಚೆಗೆ ಬನ್ನಿ; ಪ್ರತಿಪಕ್ಷಗಳಿಗೆ ಸಿದ್ದರಾಮಯ್ಯ ಸವಾಲು

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 10:27 IST
Last Updated 19 ಜುಲೈ 2025, 10:27 IST
<div class="paragraphs"><p>ಕಾಂಗ್ರೆಸ್ ಸಮಾವೇಶ</p></div>

ಕಾಂಗ್ರೆಸ್ ಸಮಾವೇಶ

   

ಮೈಸೂರು:' ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸುವ ಬಿಜೆಪಿ- ಜೆಡಿಎಸ್‌ ನವರು ಒಂದೇ ವೇದಿಕೆಗೆ ಬನ್ನಿ. ನೀವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುದನ್ನು ಬಹಿರಂಗವಾಗಿ ಚರ್ಚೆ ಮಾಡೋಣ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.‌

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ 2578 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

' ಈ ಸಭೆಗೆ ಜೆಡಿಎಸ್- ಬಿಜೆಪಿಯವರು ಬರಬೇಕಿತ್ತು. ಮೈಸೂರಿನಲ್ಲಿ ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದು ಅವರಿಗೆ ಗೊತ್ತಾಗುತ್ತಿತ್ತು. ಜನರನ್ನು ದಿಕ್ಕು ತಪ್ಪಿಸುವುದನ್ನು ನಿಲ್ಲಿಸಬೇಕಾದರೆ ನೀವು ಒಂದೇ ವೇದಿಕೆಗೆ ಬನ್ನಿ. ಚರ್ಚೆ ಮಾಡೋಣ' ಎಂದರು.

' ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ ಆಗಿದ್ದರೆ ಕೇವಲ ಮೈಸೂರಿಗೆ 2578 ಕೋಟಿ ರೂಪಾಯಿ ಅನುದಾನ ನೀಡಲು ಆಗುತ್ತಿರಲಿಲ್ಲ. ಯಾರೂ ಬೇಕಾದರೂ ಪರಿಶೀಲನೆ ಮಾಡಲಿ' ಎಂದರು.

' ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಅಭಿವೃದ್ಧಿಯ ಶಕ್ತಿಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಬಿಜೆಪಿ- ಜೆಡಿಎಸ್ ನವರಿಗೆ ಈ ಮಟ್ಟಿನ ಮತ್ಸರ ಇರಬಾರದು. ನೀವು ಮೈಸೂರಿಗೆ ಏನು ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದೀರಿ ಹೇಳಿ' ಎಂದು ಪ್ರಶ್ನಿಸಿದರು.

' ನೀವೆಂದು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರಲ್ಲ. ಆಪರೇಷನ್ ಕಮಲದಿಂದ ಅಧಿಕಾರ ಗಿಟ್ಟಿಸಿದ್ದೀರಿ. ಜೆಡಿಎಸ್ ಶಾಸಕರ ಸಂಖ್ಯೆ ಪ್ರತಿ ಐದು ವರ್ಷಕ್ಕೆ ಕಡಿಮೆ ಆಗುತ್ತಲೇ ಇವೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ಸ್ಥಾನ ಗೆದ್ದಿದ್ದೆವು. ಈಗ 18ಕ್ಕೆ ಇಳಿದಿದ್ದೀರಿ. ಮುಂದೆಂದೂ ನೀವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇದು ಗೊತ್ತಾಗಿ ಬಿಜೆಪಿ ಸೇರಿದ್ದೀರಿ' ಎಂದು ಟೀಕಿಸಿದರು.

' 2018ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕೇವಲ 1 ಸ್ಥಾನ ಗೆದಿದ್ದ ನಾವು ಕಳೆದ ಚುನಾವಣೆಯಲ್ಲಿ 9 ಸ್ಥಾನ ಗೆದ್ದೆವು. ನೀವು ಮರ್ಯಾದೆ ಉಳಿಸಿಕೊಂಡಿದ್ದೀರ? ಇಷ್ಟು ಜನ ಸಂಸದರಾಗಿದ್ದೀರಲ್ಲ, ಕರ್ನಾಟಕಕ್ಕೆ ಬರಬೇಕಾದ ತೆರಿಗೆ ಪಾಲು ವಾಪಸ್ ಕೊಡಿಸುತ್ತೀರ' ಎಂದು ಮೇಜು ಕುಟ್ಟಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.