ಮೈಸೂರು: ರೈತರಿಂದ ಯಾವುದೇ ಕಾರಣಕ್ಕೂ ಬಲವಂತವಾಗಿ ಸಾಲ ವಸೂಲು ಮಾಡಬಾರದು. ಒಂದು ವೇಳೆ ಬಲವಂತವಾಗಿ ವಸೂಲಾತಿ ನಡೆಸಿದರೆ ಹೋರಾಟ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಹಲವೆಡೆ ಅತಿವೃಷ್ಟಿಯಿಂದ, ಮತ್ತೆ ಕೆಲವೆಡೆ ಬರದಿಂದ ರೈತ ಸಮುದಾಯ ತತ್ತರಿಸಿದೆ. ಈ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ಬರಬೇಕೇ ವಿನಹಾ ಬಲವಂತವಾಗಿ ಸಾಲ ವಸೂಲು ಮಾಡಬಾರದು. ಅವರಾಗೇ ಪಾವತಿಸಿದರೆ ಸ್ವೀಕರಿಸಲಿ, ಅದನ್ನು ಬಿಟ್ಟು ಬಲವಂತದ ವಸೂಲಾತಿ ಏನಾದರೂ ಮಾಡಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಇಲ್ಲಿ ಬುಧವಾರ ಎಚ್ಚರಿಕೆ ನೀಡಿದರು.
ವಕಾಲತ್ತು ವಹಿಸಬಾರದು ಎಂದು ನಿರ್ಣಯ ಕೈಗೊಳ್ಳುವುದಕ್ಕೆ ವಕೀಲರ ಸಂಘಕ್ಕೆ ಅವಕಾಶ ಇಲ್ಲ. ಸಂಘದ ತೀರ್ಮಾನವೇ ಅಸಂವಿಧಾನಿಕ ಎಂದು ಅವರು ಹೇಳಿದರು.
ಕಾಶ್ಮೀರದಲ್ಲಿ ಇಂದಿಗೂ ತುರ್ತುಪರಿಸ್ಥಿತಿ ಇದೆ. ಅದರಿಂದ ಮುಕ್ತಗೊಳಿಸಬೇಕು ಎನ್ನುವ ಅರ್ಥದಲ್ಲಿ ನಳಿನಿ ‘ಫ್ರೀ ಕಾಶ್ಮೀರ’ ಫಲಕ ಹಿಡಿದಿದ್ದಾರೆ. ಇದು ದೇಶದ್ರೋಹ ಆಗುವುದಿಲ್ಲ. ಇಂತಹ ಪ್ರಕರಣದ ಪರವಾಗಿ ವಕಾಲತ್ತು ವಹಿಸುವುದಿಲ್ಲ ಎಂಬ ನಿರ್ಣಯವನ್ನು ಪ್ರಶ್ನಿಸಿದ ಮಂಜುಳಾ ಮಾನಸ ಮತ್ತಿತ್ತರ ವಕೀಲರ ಮೇಲೆ ಹಲ್ಲೆಗೆ ಯತ್ನಿಸಿರುವುದೂ ಸರಿಯಲ್ಲ ಎಂದು ಖಂಡಿಸಿದರು.
ಬಾಂಗ್ಲಾ ದೇಶದ ವಲಸಿಗರ ಗುಡಿಸಲುಗಳನ್ನು ತೆರವುಗೊಳಿಸಿದ್ದು ಸರಿಯಲ್ಲ. ಬಾಂಗ್ಲಾದಿಂದ ಬಂದಾಗ ಇಲ್ಲಿ ಉಳಿಯಲು ಜಾಗ ಕೊಟ್ಟವರೂ ಇವರೇ. ಈಗ ಓಡಿಸುತ್ತಿರುವವರೂ ಇವರೇ. ‘ಸಿಎಎ’ ಅಡಿ ಬಾಂಗ್ಲಾದಿಂದ ಬಂದವರಿಗೆ ಪೌರತ್ವ ಕೊಡುತ್ತೇವೆ ಎಂದು ಒಂದೆಡೆ ಹೇಳುತ್ತಾರೆ, ಮತ್ತೊಂದೆಡೆ ಓಡಿಸುತ್ತಾರೆ ಎಂದು ಕಿಡಿಕಾರಿದರು.
ಮಂಗಳೂರು ವಿಮಾನನಿಲ್ದಾಣದಲ್ಲಿ ಆದಿತ್ಯ ಎಂಬ ವ್ಯಕ್ತಿ ಬಾಂಬ್ ಇರಿಸಿದ ಕುರಿತು ಗೊತ್ತಿಲ್ಲ. ಈ ಕುರಿತು ತನಿಖೆಯಾಗಿ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.