ಮೈಸೂರು: ಜಪಾನ್ ನಲ್ಲಿ ಇರುವಂತಹ ಕಷ್ಟಸಹಿಷ್ಣು, ಸೃಜನಶೀಲ ಎಂಜಿನಿಯರುಗಳು ಭಾರತಕ್ಕೂ ಬೇಕಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಕೆ.ಜೆ.ರಾವ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾಲಯದ ವೃತ್ತಿ ಜೀವನ ಕೇಂದ್ರವು ಮಂಗಳವಾರ ಹಮ್ಮಿಕೊಂಡಿದ್ದ 'ಸ್ಕಿಲ್ ಆನ್ ವ್ಹೀಲ್ಸ್' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಂಡಮಾರುತಕ್ಕೆ ಸಿಲುಕಿ ಜಪಾನ್ ನಷ್ಟ ಅನುಭವಿಸಿರಬಹುದು. ಆದರೆ, ಇನ್ನೆರಡು ತಿಂಗಳಲ್ಲಿ ದೇಶವನ್ನು ಮುಂಚಿನಂತೆ ಕಟ್ಟಬಲ್ಲ ಶಕ್ತಿ ಅಲ್ಲಿನ ಎಂಜಿನಿಯರುಗಳಿಗಿದೆ. ಅಲ್ಲಿನ ಜನರೂ ಅಷ್ಟೇ ಕಷ್ಟ ಸಹಿಷ್ಣುಗಳು. ಭಾರತದಲ್ಲಿ ಸೃಜನಶೀಲ, ಬುದ್ಧಿವಂತ ಯುವ ಜನತೆಯಿದೆ. ಮನಸು ಮಾಡಿದಲ್ಲಿ ಬೇರೆಲ್ಲ ದೇಶಗಳನ್ನು ಹಿಂದಿಕ್ಕಬಲ್ಲ ಶಕ್ತಿ ಇವರಿಗಿದೆ. ದೇಶ ಕಟ್ಟುವ ಸಂಕಲ್ಪವಷ್ಟೇ ಬೇಕಿದೆ ಎಂದು ಹೇಳಿದರು.
ಉದ್ಯೋಗ ಪಡೆಯುವುದಕ್ಕಿಂತ, ಉದ್ಯೋಗ ಸೃಷ್ಟಿಗೆ ಯುವಕರು ಆದ್ಯತೆ ನೀಡಬೇಕು. ಉದ್ಯಮಗಳನ್ನು ಆರಂಭಿಸಬೇಕು. ಇದರಿಂದ ದೇಶ ಆರ್ಥಿಕವಾಗಿ ಬಲಗೊಳ್ಳುತ್ತದೆ. ಆಗ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ಸಿಗಲು ಸಾಧ್ಯ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.