ಎಸ್.ಎಲ್. ಭೈರಪ್ಪ
ಪ್ರಜಾವಾಣಿ ಚಿತ್ರ
ಮೈಸೂರು: ‘ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಿರುವುದು ಒಳ್ಳೆಯದು. ಸಂಸದ ಪ್ರತಾಪ ಸಿಂಹ ಅವರಿಗೆ ಟಿಕೆಟ್ ತಪ್ಪಿದ್ದರೂ ಮುಂದೆ ಅವರಿಗೆ ಇತರ ಅವಕಾಶಗಳಿವೆ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹೇಳಿದ್ದರು.
2024ರ ಮಾರ್ಚ್ 29ರಂದು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದ ಅವರು, ‘ಪ್ರತಾಪ ಆಕ್ರಮಕಾರಿ ಸ್ವಭಾವದ ನಾಯಕ. ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಮುಂದೆಯೂ ಸಾಕಷ್ಟು ಜವಾಬ್ದಾರಿಗಳಿವೆ. ಸಂಸದನಾದರೆ ಕೇವಲ ಕ್ಷೇತ್ರಕ್ಕೆ ಸೀಮಿತವಾಗಬೇಕಾಗುತ್ತದೆ. ಇಲ್ಲದಿದ್ದರೆ ಎಲ್ಲ ಕಡೆಯೂ ಕೆಲಸ ಮಾಡಬಹುದಾಗಿದೆ’ ಎಂದಿದ್ದರು.
‘ಎಡಪಂಥೀಯ ಸಾಹಿತಿಗಳು ಡಬಲ್ ಗೇಮ್ ಆಡುತ್ತಿದ್ದಾರೆ. ಅವರ ಡಬಲ್ ಗೇಮ್ ಮನಸ್ಥಿತಿ ಹಲವು ಬಾರಿ ಸಾಬೀತಾಗಿದೆ. ತತ್ವ– ಸಿದ್ಧಾಂತಗಳ ವಿಚಾರದಲ್ಲೂ ಎಡಪಂಥೀಯ ಸಾಹಿತಿಗಳದ್ದು ದ್ವಿಮುಖ ನಿಲುವು’ ಎಂದು ಟೀಕಿಸಿದ್ದರು.
‘ಪಶ್ಚಿಮ ಬಂಗಾಳದಲ್ಲಿ ಇರುವಷ್ಟು ಬಡತನ ದೇಶದ ಬೇರಾವ ರಾಜ್ಯದಲ್ಲೂ ಇಲ್ಲ. ಎಡಪಂಥೀಯ ಧೋರಣೆ ಎನ್ನುವುದು ಬರಿ ಮೋಸ ಮಾಡುವ ಕೆಲಸ. ಎಡಪಂಥೀಯರು ಅವರೆಲ್ಲರೂ ಅಪ್ರಾಮಾಣಿಕರು’ ಎಂದು ಕಿಡಿಕಾರಿದ್ದರು.
‘ಗುಜರಾತ್ನವರು ಕ್ರಿಯಾಶೀಲ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಅಂಗಡಿ ವ್ಯಾಪಾರಿಗಳು ಅಂದರೆ ಪೂರ್ಣ ಪ್ರಾಮಾಣಿಕರು ಎನ್ನಲಾಗುವುದಿಲ್ಲ. ಆದರೆ, ಗುಜರಾತ್ನಲ್ಲಿ ಮಕ್ಕಳ ಕೈಯಲ್ಲಿ ಹಣ ಕೊಟ್ಟು ಕಳುಹಿಸಿದರೂ ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಚಿಲ್ಲರೆ ಕೊಟ್ಟು ಕಳುಹಿಸುತ್ತಾರೆ. ಗುಜರಾತಿಗಳು ಸುಳ್ಳು ಹೇಳುವುದಿಲ್ಲ. ಅಂತೆಯೇ ಮೋದಿಯೂ ಪ್ರಾಮಾಣಿಕವಾಗಿದ್ದಾರೆ. ಅವರು ವ್ಯಾಪಾರಿಯಾದರೂ ಪ್ರಾಮಾಣಿಕರಾಗಿದ್ದಾರೆ. ಅವರ ವ್ಯಾಪಾರ ಹಣಕ್ಕಾಗಿ ಅಲ್ಲ; ದೇಶಕ್ಕಾಗಿ’ ಎಂದು ಭೈರಪ್ಪ ವಿಶ್ಲೇಷಿಸಿದ್ದರು.
‘ಅವರು ಮುಖ್ಯಮಂತ್ರಿ ಹುದ್ದೆ ಬಿಟ್ಟು ನವದೆಹಲಿಗೆ ಬರುವಾಗ ಅವರ ಖಾತೆಯಲ್ಲಿದ್ದ ₹ 23ಲಕ್ಷ ಹಣವನ್ನು ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಟ್ಟು ಬಂದರು. ಅದು ಮಾದರಿ ಎನಿಸಿತು. ಕೇಂದ್ರ ಸರ್ಕಾರದಲ್ಲೂ ಅದನ್ನು ಅಳವಡಿಸಿಕೊಂಡರು. ಕಾರು ಮಾರಾಟದಿಂದ ಹಣ ಬಂತು ಎನ್ನುವುದು ಆರ್ಥಿಕತೆ ಅಲ್ಲ. ಅದರಿಂದ ಎಷ್ಟು ಕುಟುಂಬಕ್ಕೆ ನೆರವಾಯಿತು ಎನ್ನುವುದು ನಿಜವಾದ ಆರ್ಥಿಕತೆ. ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.