ತಲಕಾಡು: ಇಲ್ಲಿನ ಪ್ರಾಚೀನವಾದ ಗಂಗರ ಕಾಲದಿಂದಲೂ ಇರುವ ಚಿಕ್ಕಬೆಟ್ಟವು ಇಂದು ಅಭಿವೃದ್ಧಿ ಕಾಣದೆ ಅವಸಾನದಂಚಿಗೆ ತಲುಪಿದೆ.
ಎರಡು ಶತಮಾನಗಳ ಕಾಲ ಹಿಂದೆ ಕಂಚಿನಗುಡ್ಡ ಎಂದೇ ಪ್ರಸಿದ್ಧಿ ಪಡೆದಿದ್ದ ಚಿಕ್ಕ ಬೆಟ್ಟ ಕಾಲಕ್ರಮೇಣ ಬಸವನ ಗುಡ್ಡವಾಗಿ ಬದಲಾವಣೆಗೊಂಡಿದೆ.
ಸದಾ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಇಳಿಜಾರು ಮೈದಾನ ಪ್ರದೇಶ ಹೊಂದಿರುವ ವಿವಿಧ ಜಾತಿಯ ಕಾಡು ಮರಗಳು ಗುಂಪು ಸದಾ ನೆರಳಿನಿಂದ ಆವರಿಸಿದ್ದು ಮನಸ್ಸಿಗೆ ಮುದ ನೀಡುವ ಚಿಕ್ಕ ಬೆಟ್ಟದ ತಾಣವು ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ಆಶ್ರಯ ತಾಣ, ಜೊತೆಯಲ್ಲಿ ದನ–ಕರುಗಳಿಗೂ ಮೇಯಲು ಹಾಗೂ ಹಗಲಿನಲ್ಲಿ ಆಶ್ರಯ ಪಡೆಯಲು ಉತ್ತಮ ಸ್ಥಳವಾಗಿದೆ.
ಗ್ರಾಮ ಬೆಳೆದಂತೆ ಕಂದಾಯ ಜಮೀನುಗಳು, ಹೊಸ ಬಡಾವಣೆಗಳು ಹುಟ್ಟಿಕೊಂಡು ಬಸವನಗುಡ್ಡ ಒತ್ತುವರಿಯಾಗಿ ಅನ್ಯರ ಪಾಲಾಗುತ್ತಿದೆ. ಇದರ ಜೊತೆಯಲ್ಲಿ ಬೆಟ್ಟದ ಮೇಲಿದ್ದ ಕಲ್ಲು, ಮರಗಳು ನಾಶವಾಗಿ ಇಂದು ಪಾಳು ಗುಡ್ಡದಂತಾಗಿದೆ.
ಈ ಪ್ರಾಚೀನ ಗುಡ್ಡವನ್ನು ರಕ್ಷಿಸಲು ಸರ್ಕಾರದಿಂದಾಗಲಿ, ಸಾರ್ವಜನಿಕರಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಮುಂದಾಗಿಲ್ಲ. ಪ್ರಾಚೀನ ಗುಡ್ಡವನ್ನು ರಕ್ಷಿಸಿದರೆ, ಪರಿಸರವೂ ಉಳಿದು ದನ– ಕರುಗಳಿಗೆ ಮೇವು, ಹೊಸಪೀಳಿಗೆಗೆ ಗುಡ್ಡದ ಮಹತ್ವ ಅರಿಯಲು ಸಹಾಯವಾಗುವುದು. ಇದರೊಂದಿಗೆ ಗುಡ್ಡದಲ್ಲಿ ಆಧ್ಯಾತ್ಮಿಕ ಕೇಂದ್ರ ತೆರೆಯುವಂತೆ ಗ್ರಾಮಸ್ಥರಾದ ಶ್ರೀನಿವಾಸರಾವ್ ಗೋವಿಂದು, ವಿಜಯಭಾಸ್ಕರ್, ಯಜಮಾನ್ ನರಸಿಂಹಣ್ಣ, ರಂಗಸ್ವಾಮಿ, ಪ್ರಮೋದ್, ನಾಗರಾಜ್ ಹಾಗೂ ಹಳೇಬೀಡು ಮಾದೇಶ್ ಅವರ ಅಭಿಪ್ರಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.