ADVERTISEMENT

ಸಾಮಾಜಿಕ ಅಸಮಾನತೆ ಇನ್ನೂ ಜೀವಂತ: ಮುಖ್ಯಮಂತ್ರಿ ಬೊಮ್ಮಾಯಿ ವಿಷಾದ

‘ಬೆಳ್ಳಿ ಬೆಳಗು’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 11:40 IST
Last Updated 10 ಡಿಸೆಂಬರ್ 2022, 11:40 IST
   

ಮೈಸೂರು: ‘ಸಮಾಜದಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಅಸಮಾನತೆ ಇಂದಿಗೂ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಚಾಮುಂಡಿ ಬೆಟ್ಟದ ಪಾದದಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದಿಂದ ರಜತ ಮಹೋತ್ಸವದ ಅಂಗವಾಗಿ ಎರಡು ದಿನಗಳವರೆಗೆ ಆಯೋಜಿಸಿರುವ ‘ಬೆಳ್ಳಿ ಬೆಳಗು’ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮ ಸಮಾಜದ ನಿರ್ಮಾಣವನ್ನು ಬಯಸಿದ್ದ ಬಸವಣ್ಣನ ವಿಚಾರ ಒಂದು ಧರ್ಮಕ್ಕೆ ಸೀಮಿತವಾದುದಲ್ಲ. ಅವರು ಇಂದಿಗೂ ಪ್ರಸ್ತುತವಾಗಿದ್ದಾರೆ. ಅಸಮಾನತೆ, ಮೂಢನಂಬಿಕೆ ಹಾಗೂ ಲಿಂಗ ತಾರತಮ್ಯದ ‌ವಿರುದ್ಧ ಹೋರಾಡಿದ್ದರು. ಆದರೆ, ಆ ಪದ್ಧತಿಗಳು ಇಂದಿಗೂ ಇವೆ. ಈ ಪರಿಸ್ಥಿತಿ ಬಂದಿರುವುದೇಕೆ ಎಂಬ ಬಗ್ಗೆ ಬಸವ ಭಕ್ತರಾದವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಈಗಲೂ ಎಲ್ಲರಿಗೂ ಸಮಾನತೆ ತಂದುಕೊಡಲಾಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ‌ನಿಂತಿಲ್ಲ. ಸಂಪತ್ತಿನ ಹಂಚಿಕೆಯಾಗಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಸಿಗದಿದ್ದರೆ ಆಗುವುದಿಲ್ಲ: ‘ಬಸವಣ್ಣ ಈಗಲೂ ಪ್ರಸ್ತುತವಾಗಬೇಕಾದ ಪರಿಸ್ಥಿತಿ ಬರಬೇಕಾಗಿತ್ತಾ?’ ಎಂದು ಕೇಳಿದ ಮುಖ್ಯಮಂತ್ರಿ, ‘ಬಸವಣ್ಣನ ವಿಚಾರಗಳ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ತೊಡಬೇಕು. ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರಿಗೂ ಪಾಲು ಸಿಗದಿದ್ದರೆ ಸಮಗ್ರವಾದ ಅಭಿವೃದ್ಧಿ ಆಗುವುದಿಲ್ಲ’ ಎಂದು ಹೇಳಿದರು.

‘ವಚನಗಳ ಸಾರವನ್ನು ‌ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಎಲ್ಲರೂ ನಮ್ಮವರೆಂಬ ಭಾವನೆಯಿಂದ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು. ಗಳಿಸಿದ್ದರಲ್ಲಿ ಹಂಚಿಕೊಂಡು ಜೀವನ ನಡೆಸಿದರೆ ಬಸವಣ್ಣ ಬಯಸಿದ ಸಮಾಜ ನಿರ್ಮಾಣ ಮಾಡಬಹುದಾಗಿದೆ’ ಎಂದು ಆಶಯ ವ್ಯಕ್ತಪಡಿಸಿದರು.

‘ಒಳ್ಳೆಯ ಕೆಲಸ ಮಾಡುವುದರಿಂದ ನಿಜವಾದ ಶ್ರೀಮಂತಿಕೆ ಬರುತ್ತದೆ. ಬಸವಾದಿ ಶರಣರು, ಮೈಸೂರು ಅರಸರು ಸತ್ಕಾರ್ಯ ಮಾಡಿದ್ದರಿಂದಲೇ ಎಲ್ಲರೂ ಈಗಲೂ ನೆನೆಯುತ್ತಿದ್ದಾರೆ. ಅಂಥವರೇ ನಿಜವಾದ ಶ್ರೀಮಂತರು. ನಾವೆಲ್ಲರೂ ಬಸವಪಥದಲ್ಲಿ ನಡೆದರೆ ಬದುಕನ್ನು ಹಸನುಗೊಳಿಸಿಕೊಳ್ಳಬಹುದು’ ಎಂದರು.

ಮುಖ್ಯಮಂತ್ರಿಗೆ ಶ್ರೀಗಳ ಶ್ಲಾಘನೆ

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಹಿಂದಿನಂತೆ ಬಸವಣ್ಣನನ್ನು ಪರಿಚಯಿಸಬೇಕಾದ ಅಗತ್ಯವಿಲ್ಲ. ಈಗ ಮನೆಮಾತಾಗಿದ್ದಾರೆ. ಅವರ ವಚನಗಳು ಮನೆಗಳನ್ನು ತಲುಪುತ್ತಿವೆ’ ಎಂದು ನುಡಿದರು.

‘ಬಸವರಾಜ ಬೊಮ್ಮಾಯಿ ಅತ್ಯುತ್ತಮ ಆಡಳಿತದ ಅನುಭವ ಪಡೆದಿದ್ದಾರೆ. ಆಡಳಿತದ ಮೇಲೆ ವಿಶೇಷ ಹಿಡಿತ ಪಡೆದುಕೊಂಡಿದ್ದಾರೆ. ಆಳವಾಗಿ ಅಧ್ಯಯನ ಮಾಡಿದ ರಾಜಕಾರಣಿಗಳಲ್ಲಿ ಒಬ್ಬರಾಗಿ, ಸಮತೂಕದ ಆಡಳಿದ ಅನುಭವ ಹೊಂದಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಮರಣ ಸಂಚಿಕೆ‌ ಬಿಡುಗಡೆ ಮಾಡಿದರು. ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಎಲ್.ಎಸ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಲ್.ನಾಗೇಂದ್ರ, ಮೇಯರ್‌ ಶಿವಕುಮಾರ್, ಉಪ ಮೇಯರ್‌ ಡಾ.ಜಿ.ರೂಪಾ ಯೋಗೇಶ್, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.