ADVERTISEMENT

ಮೈಸೂರು: ಶ್ರೀರಾಂಪುರo ರಿಂಗ್‌ರಸ್ತೆಯಲ್ಲಿ ಮಾರಾಮಾರಿ; ಇಬ್ಬರಿಗೆ ಗಾಯ

ಜಿಲ್ಲೆಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 6:11 IST
Last Updated 21 ಜುಲೈ 2021, 6:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಇಲ್ಲಿನ ಶ್ರೀರಾಂಪುರ ಸಮೀಪದ ರಿಂಗ್‌ರಸ್ತೆಯಲ್ಲಿ ಮಂಗಳವಾರ ಸಂಜೆ ನಾಲ್ವರು ಯುವಕರ ಮಧ್ಯೆ ಮಾರಾಮರಿ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.‌

ಡಿ.ಸಾಲುಂಡಿ ನಿವಾಸಿಗಳಾದ ಭಾಸ್ಕರ್ ಹಾಗೂ ಶಶಿಕುಮಾರ್ ಗಾಯಗೊಂಡವರು. ಇವರಲ್ಲಿ ಭಾಸ್ಕರ್ ಅವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಡ್ರಾಗನ್‌ನಿಂದ ಮನಬಂದಂತೆ ಚುಚ್ಚಿದ ಆರೋಪಿಗಳಾದ ಲಿಂಗಾಂಬುಧಿ ಪಾಳ್ಯದ ಆನಂದ ಹಾಗೂ ಅಭಿ ಅವರು ಪರಾರಿಯಾಗಿದ್ದು, ಪೊಲೀಸರು ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಗಾರೆ ಕೆಲಸ ಮಾಡಿಕೊಂಡಿದ್ದ ಆರೋಪಿ ಆನಂದ್‌ಗೂ ಗಾಯಗೊಂಡಿರುವ ಶಶಿಕುಮಾರ್ ಅವರ ಸೋದರ ಬಸವರಾಜುವಿಗೆ ವಿಜಯನಗರದಲ್ಲಿ ಸೋಮವಾರವಷ್ಟೇ ಗಲಾಟೆ ನಡೆದಿದೆ. ಈ ವೇಳೆ ಆನಂದ್ ಬಸವರಾಜು ಮೇಲ್ಲೆ ಹಲ್ಲೆ ನಡೆಸಿದ್ದ. ಈ ಕುರಿತು ವಿಚಾರಿಸಲು ಶಶಿಕುಮಾರ್ ಸ್ನೇಹಿತ ಭಾಸ್ಕರ್‌ನೊಂದಿಗೆ ರಿಂಗ್‌ರಸ್ತೆಗೆ ಬಂದಾಗ ಹೊಡೆದಾಟ ನಡೆದಿದೆ.

ADVERTISEMENT

ತಪ್ಪಿಸಿಕೊಳ್ಳಲು ದ್ವಿಚಕ್ರವಾಹನದಲ್ಲಿ ಭಾಸ್ಕರ್ ಹಾಗೂ ಶಶಿಕುಮಾರ್ ಅವರು ವೇಗವಾಗಿ ಬಂದಿದ್ದಾರೆ. ಇಲ್ಲಿದ್ದ ಮದ್ಯದಂಗಡಿ ಸಮೀಪ ಹೆಚ್ಚಿನ ಜನರಿದ್ದು, ಯಾರಾದರೂ ರಕ್ಷಣೆಗೆ ಬರಬಹುದು ಎಂದು ವಾಹನ ನಿಲ್ಲಿಸಿದ್ದಾರೆ. ಆದರೆ, ಹಿಂದಿನಿಂದ ಬಂದ ಆರೋಪಿಗಳು ಡ್ರಾಗನ್‌ನಿಂದ ಭಾಸ್ಕರ್‌ ಅವರ ದೇಹಕ್ಕೆ 5 ಕಡೆ ಹಾಗೂ ಶಶಿಕುಮಾರ್ ಅವರ ತೋಳಿಗೆ ಒಂದು ಕಡೆ ಚುಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಪ್ರಕರಣ; ಮೂವರ ಸಾವು

ವರುಣಾ ಹೋಬಳಿಯ ಆಯರಹಳ್ಳಿಯ ನಿವಾಸಿ ಬಸಪ್ಪ (44) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಹೊಟ್ಟೆನೋವು ಬರುತ್ತಿತ್ತು ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವರುಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದ ಸಮೀಪದ ಹೆಬ್ಬಸೂರು ಗ್ರಾಮದ ನಿವಾಸಿ ಮರೀಗೌಡ (48) ಕಾವೇರಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 16ರಂದು ಕಾಣೆಯಾಗಿದ್ದ ಇವರು, ಕಾವೇರಿನದಿಯ ಜಪದಕಟ್ಟೆಯ ಬಳಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಿರಿಯಾಪಟ್ಟಣದ ಲಕ್ಷ್ಮಿಪುರ ಗ್ರಾಮದ ನಿವಾಸಿ ಸಂತೋಷ್ (31) ಸಾಲಿಗ್ರಾಮದ ತಮ್ಮ ಸಂಬಂಧಿಯೊಬ್ಬರ ಮನೆಗೆ ಬಂದಿದ್ದ ವೇಳೆ ಕಾಲು ಜಾರಿ ಮನೆಯ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡೂ ಪ್ರಕರಣಗಳು ಸಾಲಿಗ್ರಾಮ ಠಾಣೆಯಲ್ಲಿ ದಾಖಲಾಗಿವೆ.

ಎಪಿಎಂಸಿಯಲ್ಲಿ ಕಳ್ಳತನ

ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಅಂಗಡಿ ಕಳ್ಳತನ ಪ್ರಕರಣಗಳು ಮುಂದುವರಿದಿವೆ. ಸೋಮವಾರ ರಾತ್ರಿ ಶಿವಶಕ್ತಿ ಟ್ರೇಡರ್ಸ್‌ನ ಬಾಗಿಲನ್ನು ಕಳ್ಳರು ಮೀಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.