ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷಾ ಕಮ್ಮಟ ಆರಂಭ

ನೃಪತುಂಗ ಕನ್ನಡ ಶಾಲೆಯಲ್ಲಿ ಫೆ. 5ರಿಂದ 7ರವರೆಗೆ ವಿಷಯ ತಜ್ಞರಿಂದ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 9:20 IST
Last Updated 5 ಫೆಬ್ರುವರಿ 2020, 9:20 IST
ಮೈಸೂರಿನ ನೃಪತುಂಗ ಕನ್ನಡ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬುಧವಾರ ಆರಂಭವಾದ ಕಮ್ಮಟದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಮೇಶಕುಮಾರ್, ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್, ಖಜಾಂಚಿ ನಾ.ನಾಗಚಂದ್ರ, ಕಾರ್ಯದರ್ಶಿ ಸ.ರ.ಸುದರ್ಶನ ಇದ್ದಾರೆ
ಮೈಸೂರಿನ ನೃಪತುಂಗ ಕನ್ನಡ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬುಧವಾರ ಆರಂಭವಾದ ಕಮ್ಮಟದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಮೇಶಕುಮಾರ್, ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್, ಖಜಾಂಚಿ ನಾ.ನಾಗಚಂದ್ರ, ಕಾರ್ಯದರ್ಶಿ ಸ.ರ.ಸುದರ್ಶನ ಇದ್ದಾರೆ   

ಮೈಸೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸ್ವರೂಪ ಈ ಬಾರಿ ಬದಲಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಸಿದ್ಧತೆ ಹೇಗಿರಬೇಕು ಎಂಬ ಕುರಿತು ನೃಪತುಂಗ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ 3 ದಿನಗಳ ಕಮ್ಮಟಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಪಾಂಡುರಂಗ ಬುಧವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಈ ಬಾರಿ ಪ್ರಶ್ನೆಪತ್ರಿಕೆಯ ಸ್ವರೂಪ ಬದಲಾಗಿದೆ ಎಂಬ ಭಯವನ್ನು ಮೊದಲು ವಿದ್ಯಾರ್ಥಿಗಳು ಬಿಡಬೇಕು. ಭಯವೇ ಯಶಸ್ಸಿನ ಮೊದಲ ಶತ್ರು’ ಎಂದು ವ್ಯಾಖ್ಯಾನಿಸಿದರು.

ಶಿಕ್ಷಕರು ಹೇಳಿದಂತೆ ಪೂರ್ವಸಿದ್ಧತೆಗಳನ್ನು ಮಾಡಿಕೊಂಡರೆ ಖಂಡಿತಾ ಯಶಸ್ಸು ಸಾಧಿಸಬಹುದು. ಭಯ ಬಿಟ್ಟು ಹರ್ಷದಿಂದ ಪರೀಕ್ಷೆ ಬರೆಯಬೇಕು ಎಂದು ಹೇಳಿದರು.‌

ADVERTISEMENT

ಪರೀಕ್ಷೆಯನ್ನು ಹಬ್ಬದಂತೆ ವಿದ್ಯಾರ್ಥಿಗಳು ಪರಿಭಾವಿಸಬೇಕು. ಸಂಭ್ರಮ, ಉಲ್ಲಾಸದಿಂದ ಪರೀಕ್ಷೆ ಬರೆದಾಗ ಉತ್ತಮ ಅಂಕಗಳು ಬರುತ್ತವೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆಯ ಖಜಾಂಚಿ ನಾ.ನಾಗಚಂದ್ರ, ‘ಶಾಲೆಯಲ್ಲಿ 26 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಬದಲಾಗಿರುವ ಪ್ರಶ್ನೆಪತ್ರಿಕೆಗಳ ಸ್ವರೂಪ, ಅದನ್ನು ಹೇಗೆ ಎದುರಿಸಬೇಕು, ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಅಂಶಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲು ಈ ಕಮ್ಮಟ ಆಯೋಜಿಸಲಾಗಿದೆ. ಇದರಲ್ಲಿ ಹೊರಗಿನ ಶಾಲೆಯ ಆಸಕ್ತ ಮಕ್ಕಳೂ ಭಾಗವಹಿಸಬಹುದು’ ಎಂದು ತಿಳಿಸಿದರು.

ಬುಧವಾರ ಕೇರ್ಗಳ್ಳಿಯ ಸರ್ಕಾರಿ ಪ್ರೌಢಶಾಲೆಯ ರವೀಶ್‌ಕುಮಾರ್ ಕನ್ನಡ ವಿಷಯವಾಗಿ, ಕುವೆಂಪುನಗರದ ಬಸವರಾಜು ಸಮಾಜ ವಿಜ್ಞಾನ ವಿಷಯವಾಗಿ ವಿಶೇಷ ಉಪನ್ಯಾಸ ನೀಡಿದರು.‌

ಫೆ. 6ರಂದು ಗೋಪಾಲಪುರ ಪ್ರೌಢಶಾಲೆಯ ಆಶಾ (ಇಂಗ್ಲಿಷ್), ಪಡುವಾರಹಳ್ಳಿಯ ಮಹೇಶ್ (ಗಣಿತ), ಫೆ. 7ರಂದು ಒಂಟಿಕೊಪ್ಪಲು ಪ್ರೌಢಶಾಲೆಯ ಡಾ.ವಿಜಿ (ಹಿಂದಿ), ದೇವಲಾಪುರದ ಬಸವರಾಜು, ಎನ್.ಲತಾ (ವಿಜ್ಞಾನ) ಉಪನ್ಯಾಸ ನೀಡುವರು. ಮೂರೂ ದಿನಗಳೂ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಕಮ್ಮಟ ನಡೆಯಲಿದೆ.

ಸಂಸ್ಥೆಯ ಅಧ್ಯಕ್ಷ ಪ.ಮಲ್ಲೇಶ್, ಕಾರ್ಯದರ್ಶಿ ಸ.ರ.ಸುದರ್ಶನ, ಶಾಲೆಯ ಮುಖ್ಯ ಶಿಕ್ಷಕ ಎಸ್.ಬಸವರಾಜು, ಸಂಪನ್ಮೂಲ ವ್ಯಕ್ತಿ ರಮೇಶ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.