ಮೈಸೂರು: ‘ಬೌದ್ಧ ಧರ್ಮದ ಕುರಿತ ಪ್ರತಿಮೆಗಳು ಆತನ ಜೀವನದ ಕಥೆಯನ್ನು ಆಧರಿಸಿ ನಿರ್ಮಾಣಗೊಂಡಿವೆ’ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಶೆಲ್ವ ಪಿಳ್ಳೆ ಅಯ್ಯಂಗಾರ್ ತಿಳಿಸಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಮಾಸಿಕ ಸರಣಿ ವಿಶೇಷ ಉಪನ್ಯಾಸದ ಅಂಗವಾಗಿ ‘ಬುದ್ಧಿಸ್ಟ್ ಪ್ರತಿಮಾ ಶಾಸ್ತ್ರ’ ವಿಷಯದ ಕುರಿತು ಮಂಗಳವಾರ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದರು.
‘ಬೌದ್ಧ ಧರ್ಮದ ಪ್ರತಿಮೆಗಳ ಬಗ್ಗೆ ಮಾಹಿತಿಯ ಕೊರತೆ ಇದೆ. ಉತ್ತರ, ಮಧುರಾ, ಗಾಂಧಾರದಲ್ಲಿ ಕಂಡುಬರುವಂತೆ ಬೌದ್ಧ ಆರಾಧನೆ ಹಾಗೂ ಆಚರಣೆ ದಕ್ಷಿಣದ ಭಾಗದಲ್ಲಿಲ್ಲ. ಹೀಗಾಗಿ ಇಲ್ಲಿ ಬೌದ್ಧನ ಪ್ರತಿಮೆಯ ಪರಿಚಯವಷ್ಟೇ ಇದೆ. ಅವಲೋಕಿತೇಶ್ವರ, ದೃಕುಟಿ, ಅಮಿತಾಭಾ, ಅಕ್ಷೋಭ್ಯ ಮುಂತಾದ ಬುದ್ಧನ ಶಿಷ್ಯಂದಿರ ಪ್ರತಿಮೆಗಳ ಪರಿಚಯವಿಲ್ಲ’ ಎಂದರು.
‘ಬೌದ್ಧ ಧರ್ಮದಲ್ಲಿರುವ ಪ್ರತಿಮೆಗಳನ್ನು ಗಮನಿಸಿದರೆ ಅದರ ಬೆಳವಣಿಗೆಯ ಚಿತ್ರಣ ದೊರೆಯುತ್ತದೆ. ಬುದ್ಧನ ಸಾವಿನ ನಂತರ ಹೀನಾಯಾನ, ಮಹಾಯಾನ ಪಂಥ ಆರಂಭವಾಯಿತು. ಮಹಾಯಾನ ಪಂಥದವರು ಬುದ್ಧನ ಅವಶೇಷಗಳಿಗೆ ಪೂಜೆ ಸಲ್ಲಿಸಲು ಸ್ತೂಪಗಳನ್ನು ನಿರ್ಮಿಸಿದರು. ಶಾರೀರಿಕ ಧಾತು, ಪರಿನಿರ್ದೇಶಿತ ಧಾತು, ಪಾರಿಭಾಷಿಕ ಧಾತುಗಳನ್ನು ಸ್ತೂಪದಲ್ಲಿಟ್ಟು ಆರಾಧಿಸಲಾಯಿತು’ ಎಂದು ವಿವರಿಸಿದರು.
‘ನಂತರದ ದಿನಗಳಲ್ಲಿ ಬುದ್ಧನ ಶಿಷ್ಯಂದಿರಿಗೂ ಪೂಜೆ ಸಲ್ಲಿಸಲಾಯಿತು. ಅವರ ಪ್ರತಿಮೆಗಳೂ ನಿರ್ಮಾಣವಾದವು. ಬಾರ್ಹೂತ್ ಮುಂತಾದ ಸ್ತೂಪದಲ್ಲಿ ಮನುಕುಲಕ್ಕೆ ಸಂದೇಶ ನೀಡುವ ಬುದ್ಧನ ಜಾತಕ ಕಥೆಗಳನ್ನು ಚಿತ್ರಿಸಿದರು. ಕ್ರಮೇಣ ಬುದ್ಧನ ಮುದ್ರೆ, ಚಿಹ್ನೆ, ಪಾದುಕೆ ಹಾಗೂ ಸಂಕೇತವುಳ್ಳ ಪ್ರತಿಮೆಗಳು ಅಸ್ತಿತ್ವಕ್ಕೆ ಬಂದವು’ ಎಂದರು.
ಪುರಾತತ್ವ ಇಲಾಖೆ ಆಯುಕ್ತ ಎ. ದೇವರಾಜು ಮಾತನಾಡಿ, ‘ಪಠ್ಯದಲ್ಲಿರುವುದಷ್ಟೇ ಇತಿಹಾಸವಲ್ಲ, ಅದನ್ನು ಹೊರತುಪಡೆಸಿದ ವಿಚಾರಗಳನ್ನು ತಿಳಿಸಲು ಈ ಸರಣಿ ಆರಂಭಿಸಲಾಗಿದೆ. ಇಲಾಖೆಯು 118 ತಾಲ್ಲೂಕಿನ ಪ್ರಾಚ್ಯ ವಸ್ತು ಸಂಗ್ರಹಣೆ ಕಾರ್ಯ ಮುಗಿಸಿದೆ. ಗ್ರಾಮದಲ್ಲಿರುವ ಸ್ಮಾರಕವನ್ನು ರಾಜ್ಯ ರಕ್ಷಿತ ಸ್ಮಾರಕ ಎಂದು ಗುರುತಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಹೇಳಿದರು.
‘ಸ್ಮಾರಕಗಳ ಬಗ್ಗೆ ಅಧಿಸೂಚನೆ ಹೊರಡಿಸಿದರೆ ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ನಾಶಪಡಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಇರುತ್ತದೆ. ಸ್ಮಾರಕ ಪರಂಪರೆಯ ಧ್ಯೂತಕ ಅವು ಆಯಾಯ ಕಾಲಘಟ್ಟದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಉದಾಹರಣೆಯಾಗಿ ಉಳಿದಿದೆ. ಅವುಗಳ ರಕ್ಷಣೆ ನಮ್ಮ ಹೊಣೆ’ ಎಂದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಿ.ಎನ್.ಮಂಜುಳಾ, ಟಿ. ತಾರಕೇಶ್, ಅಂಬರೀಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.