ADVERTISEMENT

ಮಕ್ಕಳ ಪ್ರತಿಭೆಗೆ ‘ಅರಿವಿನ ವೇದಿಕೆ’

ಅರಿವು ಶಾಲೆಯಲ್ಲಿ ವಿನೂತನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 13:09 IST
Last Updated 17 ಆಗಸ್ಟ್ 2022, 13:09 IST
ಅರಿವು ಶಾಲೆಯಲ್ಲಿ ಕಾರ್ಯಕ್ರಮ ನೀಡಿದ ವಿದ್ಯಾರ್ಥಿ
ಅರಿವು ಶಾಲೆಯಲ್ಲಿ ಕಾರ್ಯಕ್ರಮ ನೀಡಿದ ವಿದ್ಯಾರ್ಥಿ   

ಮೈಸೂರು: ಶಾಲಾ–ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪ್ರದರ್ಶನ, ಪಠ್ಯೇತರ ಚಟುವಟಿಕೆಗಳಲ್ಲಿ ಕೆಲವೇ ಮಕ್ಕಳು ಅವಕಾಶ ಪಡೆದುಕೊಳ್ಳುವುದು ಸಾಮಾನ್ಯ. ಆದರೆ, ನಗರದ ‘ಅರಿವು’ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಶಾಲೆಯಲ್ಲಿ ಎಲ್ಲ ಮಕ್ಕಳಿಗೂ ವೇದಿಕೆ ಕಲ್ಪಿಸುವ ಮೂಲಕ, ಅವರ ಪ್ರತಿಭೆಯನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಾಯಿತು.

ಶಾಲೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮವು ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು. ಚಿಣ್ಣರು ತಮ್ಮಿಷ್ಟದ ವಿಷಯದ ಮೇಲೆ ‘ಪ್ರತಿಭಾ ಪ್ರದರ್ಶನ’ ಮಾಡಿ ಗಮನಸೆಳೆದರು. ಅದನ್ನು ವೀಕ್ಷಿಸಿ ಪೋಷಕರು ಮತ್ತು ಶಿಕ್ಷಕರು ಪುಳಕ ಅನುಭವಿಸಿದರು. ಮಕ್ಕಳ ಪ್ರತಿಭೆ ಕಂಡು ಚಪ್ಪಾಳೆಯ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮಕ್ಕಳಿಗೆ ‘ವೇದಿಕೆಯ ಭಯ’ (ಸ್ಟೇಜ್ ಫಿಯರ್‌) ಹೋಗಲಾಡಿಸುವ ಪ್ರಯತ್ನದ ಭಾಗವಾಗಿ ನಡೆದ ಪ್ರಯತ್ನ ಗಮನಸೆಳೆಯಿತು.

ADVERTISEMENT

ಗಾನಶ್ರೀ ಹಾಡಿದರು. ಪೂಜಾ ಭರತನಾಟ್ಯ ಪ್ರಸ್ತುತಪಡಿಸಿದರು. ರುಹಾನಿ ಕೀಬೋರ್ಡ್‌ ನುಡಿಸಿದರು. ಕ್ಷಮ್ಯಾ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಡಿದರು. ಚಿರಾಗ್‌ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರು. ಪೃಥ್ವಿ ವಾದ್ಯ ನುಡಿಸಿದರೆ, ವಿಭುಹಾಡಿದರು. ಇಶಾಂತ್‌ ಕಸದಿಂದ ರಸ ಪ್ರಯೋಗ ಪ್ರದರ್ಶಿಸಿದರು. ಗೌರಿ ‘ನೆರಳಿನೊಂದಿಗೆ ಕತೆ’ ಹೇಳಿದರು. ಸ್ನೇಹಾ ಭರತನಾಟ್ಯ ಕಲೆ ಪ್ರದರ್ಶಿಸಿದರು. ಮಾನ್ಯ ಮತ್ತು ಶ್ರೇಯಾ ಪಿ.ಕಿರಣ್‌ ಹಾಡಿದರೆ, ವಿಘ್ನೇಶ್ ಕೀಬೋರ್ಡ್‌ ನುಡಿಸಿದರು. ರಾಜೇಂದ್ರ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿದರು. ವರಮಹಾಲಕ್ಷ್ಮಿ ನೃತ್ಯ ಕಾರ್ಯಕ್ರಮ ನೀಡಿದರು.

ಸರಸ್ವತಿ ನಡೆಸಿಕೊಟ್ಟ ‘ಸ್ಟಾಂಡ್ ಅಪ್ ಕಾಮಿಡಿ’ (ಹಾಸ್ಯ ಕಾರ್ಯಕ್ರಮ) ನೆರೆದಿದ್ದವರಲ್ಲಿ ನಗೆಉಕ್ಕಿಸಿತು. ಆದಿತ್ಯ ಕೊಳಲು ವಾದನದ ಮೂಲಕ ತನ್ಮಯಗೊಳಿಸಿದರು. ಏಕಪಾತ್ರಾಭಿನಯದಲ್ಲಿ ಭಾವಾಜ್ಞ ಮಿಂಚಿದರು. ‘ಹೆಜ್ಜೆ ನೋಡೋಣ ಬಾರಾ’ ಹಾಡನ್ನು ವೈಷ್ಣವಿ ‍ಪ್ರಸ್ತುತಪಡಿಸಿದರು.

ಅಭಿನಂದನ್ ಮತ್ತು ನಿಶ್ಚಯ್, ಶ್ರೀವಿದ್ಯಾ ಕೂಡ ಕೀಬೋರ್ಡ್‌ ನುಡಿಸಿದರು. ಹಂಸಿಕಾ, ಪ್ರಜ್ಞಾ, ಮಹಾಲಕ್ಷ್ಮಿ ಮತ್ತು ಮೈತ್ರಿ ಭರತನಾಟ್ಯ ಪ್ರದರ್ಶಿಸಿದರು. ಪದ್ಮಿನಿ ವೀಣೆ ನುಡಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅದಿತಿ ನಿರೂಪಿಸಿದರು. 8, 9 ಹಾಗೂ 10ನೇ ತರಗತಿಯ ಮಕ್ಕಳು ಲವಲವಿಕೆಯಿಂದ ಭಾಗವಹಿಸಿದ್ದರು.

‘ಮಕ್ಕಳಿಗೆ ವೇದಿಕೆ ಕೊಡಬೇಕು ಎಂಬ ಉದ್ದೇಶದ ಕಾರ್ಯಕ್ರಮವಿದು. ಶೇ 90ರಷ್ಟು ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ತಂತ್ರಜ್ಞಾನದ ಬಗೆಗಿನ ತಮ್ಮ ತಿಳಿವಳಿಕೆಯನ್ನೂ ತಿಳಿಸಿದರು. ನಾಲ್ಕು ಮಕ್ಕಳು ಸೇರಿ ಲಯ ವಾದ್ಯ ನುಡಿಸಿದರು. ನಾವು ಯಾವ ವಿಷಯವನ್ನೂ ನೀಡಿರಲಿಲ್ಲ. ಅವರೇ ವಿಷಯ ಆಯ್ಕೆ ಮಾಡಿಕೊಂಡು ವೈವಿಧ್ಯಮಯ ಕಾರ್ಯಕ್ರಮ ಪ್ರಸ್ತುತಪಡಿಸಿದರು’ ಎಂದು ಕಾರ್ಯದರ್ಶಿ ಜನಾರ್ಧನ್‌ ಪ್ರತಿಕ್ರಿಯಿಸಿದರು.

ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.