ಮೈಸೂರು: ‘ಶಿಕ್ಷಕರು ಉದ್ಯೋಗ ಭದ್ರತೆ ಇಲ್ಲದೆ ಆತಂಕದಲ್ಲಿದ್ದು, ಸರ್ಕಾರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ತಿಳಿಸಿದರು.
ಜೆಎಸ್ಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
‘2006ರಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಸರ್ಕಾರದ ಈ ಬೇಜಾವಬ್ದಾರಿತನದಿಂದ ಶಿಕ್ಷಕರಿಗೆ ಅನ್ಯಾಯ ಆಗುತ್ತಿದೆ. ಸಮಾಜದಲ್ಲಿ ಉನ್ನತ ಸ್ಥಾನ ಪಡೆದಿರುವವರ ಹಿಂದೆ ಅವರ ಶಿಕ್ಷಕರು ಬೆನ್ನೆಲುಬಾಗಿ ನಿಂತಿದ್ದಾರೆ. ಅಂತಹ ಶಿಕ್ಷಕರು ನೋವಿನಲ್ಲಿದ್ದೇವೆ. ನಾವು ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ’ ಎಂದರು.
‘ತಂದೆ, ತಾಯಿ ತಮ್ಮ ಮಕ್ಕಳು ಲಕ್ಷಾಂತರ ಸಂಪಾದಿಸುತ್ತಾರೆ ಎಂಬ ಆಸೆಯಲ್ಲಿ ಇರುತ್ತಾರೆ. ಆದರೆ ಸರ್ಕಾರವು ₹12 ಸಾವಿರ ವೇತನ ನೀಡಿ ಮಿತಿಗಿಂತ ಹೆಚ್ಚಿನ ಕೆಲಸ ಮಾಡಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ 1.5 ಲಕ್ಷ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿ ಇದೆ. ಪ್ರತೀ ಶಾಲೆಯಲ್ಲಿ 2– 3 ಶಿಕ್ಷಕರಷ್ಟೇ ಇದ್ದಾರೆ. ಸಮಾಜದ ಬೆಳವಣಿಗೆಗೆ ಶಿಕ್ಷಣವೇ ಮೂಲ, ಹೀಗಾಗಿ ಸರ್ಕಾರ ಶಿಕ್ಷಣ, ಆರೋಗ್ಯ, ಅಭಿವೃದ್ಧಿಗೆ ಆದ್ಯತೆ ನೀಡಲಿ. ನಂತರ ಭಾಗ್ಯಗಳನ್ನು ಅನುಷ್ಠಾನಗೊಳಿಸಲಿ’ ಎಂದು ಹೇಳಿದರು.
ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಪ್ರಬಂಧ ಪ್ರಸ್ತುತಿ ಸ್ಪರ್ಧೆಯಲ್ಲಿ ಉತ್ತಮ ವಿಷಯ ವಿಭಾಗದಲ್ಲಿ ಕಾಲೇಜಿನ ಶ್ರೀಜಾ ಹಾಗೂ ಉತ್ತಮ ಪ್ರಸ್ತುತಿ ವಿಭಾಗದಲ್ಲಿ ವಿ.ಸ್ಕಂದನ್ ಪ್ರಶಸ್ತಿ ಪಡೆದರು.
ಪಿರಿಯಾಪಟ್ಟಣ ಜಿಪಿಟಿ ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ರವಿ, ಇನ್ಫೋಸಿಸ್ ಸಂಸ್ಥೆಯ ಶ್ರೀಕಂಠ, ಕಾಲೇಜಿನ ಪ್ರಾಂಶುಪಾಲ ಭಕ್ತವತ್ಸಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.