ಮೈಸೂರು: ನಗರದ ದಿ ಸಿಟಿ ಕೋ–ಆಪರೇಟಿವ್ ಬ್ಯಾಂಕ್ನ 13 ನಿರ್ದೇಶಕ ಸ್ಥಾನಗಳಿಗೆ ನ.15ರ ಭಾನುವಾರ ಚುನಾವಣೆ ನಡೆಯಲಿದೆ.
ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದ್ದು, 13 ನಿರ್ದೇಶಕ ಸ್ಥಾನಗಳಿಗೆ 36 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
13 ನಿರ್ದೇಶಕ ಸ್ಥಾನಗಳ ಪೈಕಿ 7 ಸಾಮಾನ್ಯ ವರ್ಗ, ತಲಾ ಎರಡು ಸ್ಥಾನ ಹಿಂದುಳಿದ ವರ್ಗ (ಎ) ಹಾಗೂ ಮಹಿಳೆ, ತಲಾ ಒಂದು ಸ್ಥಾನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
ಮಾರ್ಚ್ನಲ್ಲೇ ಚುನಾವಣೆ ನಡೆಯಬೇಕಿತ್ತು. ಕೋವಿಡ್, ಲಾಕ್ಡೌನ್ನಿಂದ ಮುಂದೂಡಲ್ಪಟ್ಟಿತ್ತು. ಇದೀಗ ನಡೆದಿದೆ. ಮತದಾನ ಸಮೀಪಿಸಿದಂತೆ, ಅಂತಿಮ ಅಖಾಡದಲ್ಲಿರುವ ಅಭ್ಯರ್ಥಿಗಳು ಪ್ರಚಾರ ಬಿರುಸುಗೊಳಿಸಿದ್ದಾರೆ.
ಬ್ಯಾಂಕ್ನ ಅಧಿಕಾರದ ಚುಕ್ಕಾಣಿ ಹಿಡಿಯಲಿಕ್ಕಾಗಿ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬ್ಯಾಂಕ್ನ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮಾಜಿ ಉಪಾಧ್ಯಕ್ಷ ಎಂ.ಡಿ.ನಾಗರಾಜ್ ಅವರದ್ದು ಒಂದು ತಂಡವಾದರೆ, ಮಾಜಿ ಅಧ್ಯಕ್ಷ ಎನ್.ಪ್ರಕಾಶ್, ಎನ್.ಧ್ರುವರಾಜ್ ತಂಡವೂ ಗೆಲುವಿಗಾಗಿ ತೀವ್ರ ಹಣಾಹಣಿ ನಡೆಸಿದೆ.
ಬ್ಯಾಂಕ್ನಲ್ಲಿ ಒಟ್ಟು 22 ಸಾವಿರ ಸದಸ್ಯರಿದ್ದಾರೆ. ಇವರಲ್ಲಿ 21 ಸಾವಿರ ಜನರಿಗೆ ಮತದಾನದ ಹಕ್ಕಿದೆ. ಸರ್ಕಾರದ ಈಚಿನ ನಿಯಮಾವಳಿ ಪ್ರಕಾರ ಈ ಮುಂಚೆ 4,500 ಸದಸ್ಯರಿಗೆ ಮಾತ್ರ ಮತದಾನದ ಹಕ್ಕು ದೊರೆತಿತ್ತು.
ನಿಯಮಾವಳಿ ಕುರಿತು ಬಹುತೇಕ ಸದಸ್ಯರಿಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಮತದಾನದ ಹಕ್ಕು ಕೊಡಬೇಕು ಎಂದು ಹಲವರು ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಇದರ ಫಲವಾಗಿ 21 ಸಾವಿರ ಸದಸ್ಯರಿಗೆ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ದೊರೆತಿದೆ ಎಂಬುದು ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.