
ಕೊಳ್ಳೇಗಾಲ: ‘ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ’ ಎಂದು ಸಹಾಯಕ ನಿರ್ದೇಶಕ ರಂಗಸ್ವಾಮಿ ಹೇಳಿದರು.
ನಗರದ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಆವರಣದಲ್ಲಿ ಬುಧವಾರ ನಡೆದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ನೂತನ ನಾಮಫಲಕ ಅನಾವರಣ ಮಾಡಿ ಮಾತನಾಡಿದರು.
‘ಸಂವಿಧಾನವು ಸರ್ವರಿಗೂ ಸಮಬಾಳು, ಸಮಪಾಲು ನೀಡಿದೆ. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುತ್ತಿದೆ. ವಿದ್ಯಾರ್ಥಿ, ಯುವ ಸಮುದಾಯ ಸಂವಿಧಾನ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡು ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು’ ಎಂದರು.
‘ದೇಶದಲ್ಲಿ ಕೋಮು ಭಾವನೆ, ಪ್ರಜಾಪ್ರಭುತ್ವದ ಅಣಕ, ಸಂವಿಧಾನ ವಿರೋಧಿ ಹೇಳಿಕೆಗಳು ಬರುತ್ತಿವೆ. ಇಂತಹ ಹೇಳಿಕೆ ನೀಡುವವರನ್ನು ಕಾನೂನು ರೀತಿಯಲ್ಲಿ ಶಿಕ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂವಿಧಾನ ಉಳಿವಿಗಾಗಿ ಭಾರಿ ಹೋರಾಟಗಳೇ ಆರಂಭವಾಗಿ ಇಡೀ ದೇಶ ಕತ್ತಲ ಕೂಪಕ್ಕೆ ತಳ್ಳಲ್ಪಡುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಅಂಬೇಡ್ಕರ್ ಸ್ಮಾರಕ ಸಂಘದ ನಟರಾಜು, ಪುಟ್ಟಬುದ್ದಿ, ಚಂದು, ಕೆ.ಕೆ.ಮೂರ್ತಿ, ದಿಲೀಪ್ ಸಿದ್ದಪ್ಪಾಜಿ, ಶೇಖರ್ ಬುದ್ಧ, ಗುರುಮೂರ್ತಿ, ತೇಜು, ಸಿದ್ದಪ್ಪಾಜಿ, ಮುಖಂಡ ಚಿಕ್ಕ ಮಾಳಿಗೆ, ನಟರಾಜು, ವರದರಾಜು, ಎಜಾಜ್, ಕಿಜರ್, ಆಗಸ್ಟೀನ್, ಹಾಲಿನ ಮೂರ್ತಿ, ನಟರಾಜ್ ಮಾಳಿಗೆ, ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಪೌರಾಯುಕ್ತ ನಟರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.