ಮೈಸೂರು: ಮಾನವ ಹಕ್ಕುಗಳ ಉಳಿವಿಗೆ ಪ್ರಜಾಪ್ರಭುತ್ವ ಅಗತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವದಲ್ಲೂ ಸರ್ವಾಧಿಕಾರತ್ವ ಬೆಳೆಯುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಎಂ.ಉಮಾಪತಿ ಆತಂಕ ವ್ಯಕ್ತಪಡಿಸಿದರು.
ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟ (ಪಿಯುಸಿಎಲ್)ದ ಜಿಲ್ಲಾ ಶಾಖೆ ವತಿಯಿಂದ ಇಲ್ಲಿನ ಶ್ಯಾಗಲೇ ಶಿವರುದ್ರಮ್ಮ ಟ್ರಸ್ಟ್ನಲ್ಲಿ ಗುರುವಾರ ವಿಶ್ವ ಮಾನವ ಹಕ್ಕುಗಳ ದಿನದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ವಿಶ್ವ ಮಾನವ ಹಕ್ಕುಗಳ ಸ್ವರೂಪ’ ಕುರಿತು ಮಾತನಾಡಿದರು.
ಪ್ರಸ್ತುತ ಪ್ರಪಂಚದಲ್ಲಿ ಧಾರ್ಮಿಕ ಮೂಲಭೂತವಾದವು ಮಾನವಹಕ್ಕುಗಳಿಗೆ ಬೆದರಿಕೆಯಾಗಿದೆ. ಮಂಗಳೂರಿನಲ್ಲಿ ಇತ್ತೀಚೆಗೆ ಬರೆದ ಗೋಡೆಬರಹಗಳು ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ನೀಡಿದ ಹೇಳಿಕೆಗಳು ಇದಕ್ಕೆ ಉದಾಹರಣೆಯಾಗಿವೆ ಎಂದರು.
ಹಕ್ಕುಗಳೇ ಇಲ್ಲದಿದ್ದರೆ ಅದೊಂದು ಬಗೆಯ ಗೋಡೆಗಳೇ ಇಲ್ಲದ ಜೈಲಿನ ಸ್ಥಿತಿಯಂತೆ. ವಿಶ್ವಸಂಸ್ಥೆಯು ಅನೇಕ ಮಾನವಹಕ್ಕುಗಳನ್ನು ಪರಿಗಣಿಸಿದೆ. ಇದು ನಿತ್ಯವೂ ವಿಸ್ತಾರವಾಗುತ್ತಿದೆ ಎಂದು ಮಾನವಹಕ್ಕುಗಳ ಬೆಳವಣಿಗೆಯನ್ನು ಕುರಿತು ಅವರು ವಿವರಿಸಿದರು.
ಹೈಕೋರ್ಟ್ನ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಮಾತನಾಡಿ, ‘ಜಾತಿ, ಧರ್ಮಗಳ ನಡುವಿನ ಗಲಭೆ, ವೈಷಮ್ಯ ಹೀಗೆ ಏನೇ ಆದರೂ ಕೊನೆಗೆ ಬಲಿಪಶು ಆಗುವುದು ಹೆಣ್ಣು’ ಎಂದು ಬೇಸರ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ಡಾ.ಇ.ರತಿರಾವ್, ಒಕ್ಕೂಟದ ಅಧ್ಯಕ್ಷ ಪ್ರೊ.ಪಂಡಿತಾರಾಧ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.