ADVERTISEMENT

ಕುಖ್ಯಾತ ಕಳ್ಳರ ಗುಂಪು ಪತ್ತೆ: 13 ಕಳವು ಪ್ರಕರಣಗಳಲ್ಲಿ ಬೇಕಾಗಿದ್ದ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 4:56 IST
Last Updated 1 ಸೆಪ್ಟೆಂಬರ್ 2019, 4:56 IST

ಮೈಸೂರು: ರಾಜ್ಯದ ವಿವಿಧೆಡೆ 13 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳರ ಗುಂಪೊಂದನ್ನು ಉದಯಗಿರಿ ಠಾಣೆ ಪೊಲೀಸರು ಸೆದೆ ಬಡಿದಿದ್ದಾರೆ.

ಮಂಡ್ಯ ಜಿಲ್ಲೆಯ ಚಿನಕುರಳಿ ಗ್ರಾಮದ ಮೊಹಮ್ಮದ್ ರಫೀಕ್ (25), ಮಹದೇವಪುರ ಗ್ರಾಮದ ಮೊಹಮ್ಮದ್ ಕಲೀಂ (32), ಹಾಸನ ಜಿಲ್ಲೆಯ ಬರಗೂರು ಹ್ಯಾಂಡ್ ಪೋಸ್ಟ್ ನಿವಾಸಿ ಜಾಫರ್ ಸಾದಿಕ್ (23) ಬಂಧಿತರು.

ಇವರಿಂದ 15 ಗ್ರಾಂ ಚಿನ್ನಾಭರಣ, ಮೂರು ಬೈಕ್, ₹ 5,750 ನಗದು ಸೇರಿದಂತೆ ಒಟ್ಟು ₹ 2 ಲಕ್ಷ ಮೌಲ್ಯದ ಪರಿಕರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಉದಯಗಿರಿ ಪೊಲೀಸ್ ಠಾಣೆಯಲ್ಲಿ 3, ಮೇಲುಕೋಟೆ ಠಾಣೆಯಲ್ಲಿ 5, ಕೆ.ಆರ್.ಪೇಟೆ ಠಾಣೆಯಲ್ಲಿ 2, ಪಾಂಡವಪುರ, ಶಿರಾ ಹಾಗೂ ಕೃಷ್ಣರಾಜ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ಒಟ್ಟು 13 ಕಳ್ಳತನಗಳನ್ನು ಇವರು ನಡೆಸಿದ್ದರು.

ರಾಜೀವ್ ನಗರದ ಸಿದ್ದಪ್ಪಾಜಿ ದೇವಸ್ಥಾನದ ಬಳಿ ಕಬ್ಬಿಣದ ರಾಡು ಮತ್ತು ಸ್ಕ್ರೂಡ್ರೈವರ್‌ಗಳನ್ನಿಡಿದು ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಇವರು ಹೆಚ್ಚಾಗಿ ದೇವಸ್ಥಾನಗಳು, ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಜತೆಗೆ, ದ್ವಿಚಕ್ರ ವಾಹನಗಳನ್ನೂ ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸಿಪಿ ಬಿ.ಟಿ ಕವಿತಾ ಅವರು ಈ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು. ದೇವರಾಜ ವಿಭಾಗದ ಎಸಿಪಿ ಜಿ.ಎಸ್.ಗಜೇಂದ್ರಪ್ರಸಾದ್ ಅವರ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ಸಂತೋಷ್, ಪಿ.ಎಸ್.ಐ. ಎಂ.ಜೈಕೀರ್ತಿ, ಪ್ರೊಬೆಷನರಿ ಪಿಎಸ್‌ಐ ಮಹೇಂದ್ರ, ಎ.ಎಸ್.ಐ ಸಿದ್ದರಾಜು, ಸಿಬ್ಬಂದಿಯಾದ ಬಾಬು, ಶಂಕರ್, ದಿವಾಕರ್, ಸಿದ್ದಿಕ್ ಅಹಮದ್, ಕೃಷ್ಣ, ಮಂಜುನಾಥ್, ಮೋಹನ್‌ಕುಮಾರ್, ಭೀಮವ್ವ ಕಾಲವಾಡ, ಮಾಲತಿ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.