ADVERTISEMENT

ಅಲ್ಲಿ ಭೂಮಿಪೂಜೆ; ಮೈಸೂರಲ್ಲಿ ಕಟ್ಟೆಚ್ಚರ

ಸಭೆ, ಸಮಾರಂಭಗಳನ್ನು ನಿಷೇಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 9:15 IST
Last Updated 5 ಆಗಸ್ಟ್ 2020, 9:15 IST
ಅಪೂರ್ವ ಸ್ನೇಹ ಬಳಗದ ವತಿಯಿಂದ ರಾಮಮಂದಿರದ ಭೂಮಿಪೂಜೆ ನಿಮಿತ್ತ ಮನೆಮನೆಯಲ್ಲಿ ಹಣತೆ ಬೆಳಗಿಸಬೇಕು ಎಂದು ಮೈಸೂರಿನಲ್ಲಿ ಮಂಗಳವಾರ ಜಾಗೃತಿ ಮೂಡಿಸಲಾಯಿತು. ಬಳಗದ ಅಧ್ಯಕ್ಷ ಅಪೂರ್ವ ಸುರೇಶ್‌, ಮುಖಂಡರಾದ ವಿಕ್ರಂ ಅಯ್ಯಂಗಾರ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಇತರರು ಇದ್ದಾರೆ
ಅಪೂರ್ವ ಸ್ನೇಹ ಬಳಗದ ವತಿಯಿಂದ ರಾಮಮಂದಿರದ ಭೂಮಿಪೂಜೆ ನಿಮಿತ್ತ ಮನೆಮನೆಯಲ್ಲಿ ಹಣತೆ ಬೆಳಗಿಸಬೇಕು ಎಂದು ಮೈಸೂರಿನಲ್ಲಿ ಮಂಗಳವಾರ ಜಾಗೃತಿ ಮೂಡಿಸಲಾಯಿತು. ಬಳಗದ ಅಧ್ಯಕ್ಷ ಅಪೂರ್ವ ಸುರೇಶ್‌, ಮುಖಂಡರಾದ ವಿಕ್ರಂ ಅಯ್ಯಂಗಾರ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಹಾಗೂ ಇತರರು ಇದ್ದಾರೆ   

ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವುದರಿಂದ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಆಗಸ್ಟ್ 5ರ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪೂಜಾ ಕಾರ್ಯ ಕ್ರಮಗಳು, ಸಭೆ-ಸಮಾರಂಭಗಳು, ಮೆರವಣಿಗೆ, ಸಂಭ್ರಮಾಚರಣೆ, ಪಟಾಕಿ ಸಿಡಿಸುವುದು, ಧ್ವನಿರ್ವಧಕ ಬಳಸುವುದು, ಫ್ಲೆಕ್ಸ್-ಬ್ಯಾನರ್, ಎಲ್‍ಇಡಿ, ಎಲ್‍ಸಿಡಿ ಸ್ಕ್ರೀನ್ ಇತ್ಯಾದಿಗಳನ್ನು ಅಳವಡಿಸಿ ಕಾರ್ಯಕ್ರಮ ಆಯೋಜಿಸುವುದನ್ನು ಮತ್ತು ಗುಂಪುಗೂಡುವಿಕೆಯನ್ನು ನಿರ್ಬಂಧಿಸಲಾಗಿದೆ.

ಈ ಸಮಯದಲ್ಲಿ ಬೇರೆ ಯಾವುದೇ ರೀತಿಯ ಧರಣಿ, ಪ್ರತಿಭಟನೆ, ಬೈಕ್ ರ‍್ಯಾಲಿಗಳನ್ನು ಸಹ ನಿಷೇಧಿಸಲಾಗಿದೆ.

ADVERTISEMENT

ಆದರೆ, ಈ ಆದೇಶವು ದೇವಸ್ಥಾನಗಳಲ್ಲಿ ನಡೆಯುವ ದೈನಂದಿನ ಪೂಜಾ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಮತ್ತು ದೇವಸ್ಥಾನಗಳ ಪೂಜಾ ಕಾರ್ಯಕ್ರಮಗಳಲ್ಲಿ ಒಮ್ಮೆಗೆ ಐವತ್ತು ಜನರು ಮೀರದಂತೆ ಮತ್ತು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟವರಿಗೆ ನಗರ ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಸೂಚಿಸಿದ್ದಾರೆ.

ಡಿಸಿಪಿ ಅವರಿಂದ ಸೂಚನೆ ರವಾನೆ: ಡಿಸಿಪಿ ಡಾ.ಪ್ರಕಾಶ್‌ಗೌಡ ಅವರು ಈಗಾಗಲೇ ಎಲ್ಲ ಠಾಣೆಗಳನ್ನು ಸ್ಪಷ್ಟ ಸೂಚನೆಗಳನ್ನು ರವಾನಿಸಿದ್ದು ಹದ್ದಿನ ಕಣ್ಣಿಡುವಂತೆ ಆದೇಶಿಸಿದ್ದಾರೆ.

ಯಾವುದೇ ಕಾರಣಕ್ಕೂ ಮೆರವಣಿಗೆ ಮತ್ತು ರ‍್ಯಾಲಿ ನಡೆಸಲು ಅವಕಾಶ ನೀಡಬಾರದು, ಯಾವುದೇ ಧರ್ಮ, ಜಾತಿ ಅವರ ಭಾವನೆಗಳನ್ನು ಕೆರಳಿಸುವಂತಹ ಹೇಳಿಕೆಗಳನ್ನು ಮತ್ತು ಘೋಷಣೆಗಳನ್ನು ಕೂಗುವುದಕ್ಕೆ ಅವಕಾಶ ನೀಡಬಾರದು, ರಾಮ ಚಿತ್ರ ಅಥವಾ ಇನ್ನಾವುದೇ ಬ್ಯಾನರ್, ಬಂಟಿಂಗ್ಸ್‌ಗಳನ್ನೂ ಅಳವಡಿಸದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ಠಾಣಾ ಸರಹದ್ದಿನಲ್ಲಿರುವ ಗೂಂಡಾಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು, ಅನುಮತಿ ಇಲ್ಲದೇ ಮೈಕ್ ಬಳಕೆ ಮಾಡಬಾರದು, ಸಿಸಿಟಿವಿಗಳನ್ನು ಸುಸ್ಥಿತಿಯಲ್ಲಿರಿಸಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಈಗಾಗಲೇ ಅನುಮಾನಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ. ಮಂಡಿ ಠಾಣಾ ವ್ಯಾಪ್ತಿಯಲ್ಲಿ ಐವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ಆಗಸ್ಟ್ ಬೆಳಿಗ್ಗೆ 6 ಗಂಟೆಯವರೆಗೂ ನಗರದಲ್ಲಿ ಮದ್ಯಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.