ಪಿರಿಯಾಪಟ್ಟಣ: ಬೆಳೆ ವಿಫಲಗೊಂಡಿದ್ದರಿಂದ ಸಾಲದ ಬಾಧೆ ತಾಳಲಾರದೆ ತಾಲ್ಲೂಕಿನ ಚೌತಿ ಗ್ರಾಮದ ದೇವಮ್ಮ(50) ವಿಷ ಸೇವಿಸಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವಮ್ಮ 2 ಎಕರೆ ಜಮೀನು ಹೊಂದಿದ್ದಾರೆ. ಅಬ್ಬೂರಿನ ಎಸ್ಬಿಐ ಎಡಿಬಿ ಬ್ಯಾಂಕ್ನಲ್ಲಿ ಕೃಷಿ ಸಾಲ ₹ 2 ಲಕ್ಷ ಹಾಗೂ ಸ್ವಸಹಾಯ ಸಂಘದಲ್ಲೂ ಸಾಲ ಪಡೆದಿದ್ದಾರೆ.
ಹೊಲದಲ್ಲಿ ಬೆಳೆದಿದ್ದ ಮುಸುಕಿನ ಜೋಳ, ಶುಂಠಿ ಮತ್ತಿತರ ಬೆಳೆ ವಿಫಲಗೊಂಡಿದ್ದರಿಂದ ಮನೆಯಲ್ಲೇ ಶುಕ್ರವಾರ ವಿಷ ಸೇವಿಸಿದ್ದರು. ವಿಷಯ ತಿಳಿದೊಡನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ದೇವಮ್ಮ ಪುತ್ರಿ ಜಯಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ವರದಕ್ಷಿಣೆ ಕಿರುಕುಳ
ಹುಣಸೂರು: ನಗರದ ಕಲ್ಕುಣಿಕೆ ಬಡಾವಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಲಕ್ಷ್ಮೀ (23) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಲ್ಕುಣಿಕೆ ಬಡಾವಣೆಯ ಕಾಳಯ್ಯ ಪುತ್ರ ಯೋಗೇಶ್ ಕೆ. ಎಂಬುವರೊಂದಿಗೆ 2019ರ ಏಪ್ರಿಲ್ನಲ್ಲಿ ಲಕ್ಷ್ಮೀ ವಿವಾಹವಾಗಿತ್ತು. ವರದಕ್ಷಿಣೆ ವಿಚಾರವಾಗಿ ಪತಿ ಮನೆಯವರು ಕಿರುಕುಳ ನೀಡುತ್ತಿದ್ದರು. ಯೋಗೇಶ್ ಬೇಡಿಕೆಯಂತೆ 450 ಗ್ರಾಂ ಚಿನ್ನ ನೀಡಿ, ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟಿದ್ದರೂ, ಮಗಳಿಗೆ ಹಿಂಸೆ ನೀಡುತ್ತಿದ್ದರು ಎಂದು ಲಕ್ಷ್ಮೀಯ ತಂದೆ ಬಿ.ಬಸವಣ್ಣ ದೂರಿನಲ್ಲಿ ತಿಳಿಸಿದ್ದಾರೆ.
ಅಳಿಯ ಯೋಗೇಶ್ ಸಹೋದರ ಈಚೆಗೆ ₹ 5 ಲಕ್ಷ ನಗದನ್ನು ತವರಿನಿಂದ ತರುವಂತೆ ಒತ್ತಡ ಹಾಕಿದ್ದು, ಅವರ ಬೇಡಿಕೆಗೆ ಸ್ಪಂದಿಸಿ ಸ್ವಗ್ರಾಮದಲ್ಲಿದ್ದ ನಿವೇಶನ ಮಾರಾಟ ಮಾಡಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಹಣ ನೀಡಿದೆ. ಹೀಗಿದ್ದರೂ ಮಗಳಿಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ ಕಾರಣ ಆಕೆ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.