ಮೈಸೂರು: ಸುನೀತಾ ಚಂದ್ರಕುಮಾರ್ ಅವರ ‘ರಘುಲೀಲಾ ಸಂಗೀತ ಮಂದಿರ’ದ ನಗರ ಸಂಕೀರ್ತನೆಯೊಂದಿಗೆ 64ನೇ ಪಾರಂಪರಿಕ ಸಂಗೀತೋತ್ಸವವು ಸೋಮವಾರ ಸಂಪನ್ನಗೊಂಡಿತು.
ವಾಣಿವಿಲಾಸ ಮೊಹಲ್ಲಾದ 8ನೇ ಕ್ರಾಸ್ನಲ್ಲಿ ‘ಶ್ರೀಪ್ರಸನ್ನ ವಿದ್ಯಾಗಣಪತಿ ಮಹೋತ್ಸವ ಚಾರಿಟಬಲ್ ಟ್ರಸ್ಟ್’ (ಎಸ್ಪಿವಿಜಿಎಂಸಿ), ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಸಹಯೋಗದಲ್ಲಿ ನಡೆದ 13 ದಿನಗಳ ಉತ್ಸವಕ್ಕೆ ಸಹೃದಯರು ಸಾಕ್ಷಿಯಾದರು.
ವಿದ್ವಾನ್ ಟಿ.ಎಂ.ಕೃಷ್ಣ ಅವರ ಗಾಯನದೊಂದಿಗೆ ಗರಿಗೆದರಿದ ಸಂಗೀತ ಉತ್ಸವಕ್ಕೆ ಉದ್ಯಮಿ ಕ್ಯಾಪ್ಟನ್ ಜಿ.ಗೋಪಿನಾಥ್ ಸೆ.28ರಂದು ಚಾಲನೆ ನೀಡಿದ್ದರು.
ಮೇಲುಕೋಟೆ ನಾಗೇಶ್, ರಾಹುಲ್ ವೆಲ್ಲಾಳ್, ಪೃಥ್ವಿ ಭಾಸ್ಕರ್, ಮನ್ನಾರ್ಗುಡಿ ಶಂಕರ್ ರಾಮನ್, ಪದ್ಮಾ ಶಂಕರ್, ರಮಣ ಬಾಲಚಂದರ್, ಇಶಾನ್ ಘೋಷ್, ಭಾರದ್ವಾಜ್ ಸಾತವಲ್ಲಿ, ಸುನಿಲ್ ಗಾರ್ಗ್ಯಾನ್, ಕಾರ್ತಿಕ್ ಪ್ರಣವ್ ಇದೇ ಮೊದಲ ಬಾರಿ ಕಛೇರಿಯನ್ನು ನೀಡಿದರು.
ಅಕ್ಕರೈ ಸೋದರಿಯರು, ಬೆಂಗಳೂರು ಸಹೋದರರು, ವಿನಯ್ ಶರ್ವ, ಅಭಿಷೇಕ್ ರಘುರಾಮ್, ವಿದ್ವಾನ್ ವಿಠ್ಠಲ ರಾಮಮೂರ್ತಿ, ನೆಮ್ಮಾರ ಕಣ್ಣನ್– ಆನಂದ ಬ್ರಹ್ಮ ನಾದ ಹಾಗೂ ಗಾಯನ ಲಹರಿಯು ಕಿವಿದುಂಬಿತ್ತು.
ಗಣೇಶ ವಿಸರ್ಜನೆ: ಪ್ರತಿಷ್ಠಾಪಿಸಲಾಗಿದ್ದ ‘ನಾದಪ್ರಿಯ’ ಗಣೇಶನ ವಿಸರ್ಜನೆ, ಸೋಮವಾರ ಸಂಜೆ ನಡೆಯಿತು. ಇದಕ್ಕೂ ಮೊದಲು ಚಳ್ಳಕೆರೆ ಶ್ರೀನಿವಾಸ ಹಾಗೂ ವೇಣುಗೋಪಾಲ್ ಪವಮಾನ ಹೋಮ ನಡೆಸಿದರು. ನಂತರ ಅನ್ನಸಂತರ್ಪಣೆಯೂ ನಡೆಯಿತು.
ಟ್ರಸ್ಟ್ ಕಾರ್ಯದರ್ಶಿ ಸಿ.ಆರ್.ಹಿಮಾಂಶು ಮಾತನಾಡಿ, ‘ಎಲ್ಲರ ಸಹಕಾರದಿಂದ ಉತ್ಸವ ಯಶಸ್ವಿಯಾಗಿ ಕೊನೆಗೊಂಡಿದೆ. ದಾನಿಗಳು, ಪೋಷಕರು, ಸಹೃದಯರು ನೇರ ಹಾಗೂ ಪರೀಕ್ಷವಾಗಿ ಉತ್ಸವದ ಯಶಸ್ಸಿಗೆ ಶ್ರಮಿಸಿದ್ದಾರೆ’ ಎಂದು ಸ್ಮರಿಸಿದರು.
ಟ್ರಸ್ಟ್ ಅಧ್ಯಕ್ಷ ಎಂ.ಜಗನ್ನಾಥ ಶೆಣೈ, ಉಪಾಧ್ಯಕ್ಷ ಟಿ.ಎಸ್. ವೇಣುಗೋಪಾಲ್, ಖಜಾಂಚಿ ಆರ್.ಗುರುರಾಜ್, ಟ್ರಸ್ಟಿಗಳಾದ ಶೈಲಜಾ, ಅಮರೇಶ ದಾಸ್, ಎಂ.ಕೆ. ಶ್ರೀಧರ್, ವಸಂತ್, ಸಿ.ಚಲುವರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.