ADVERTISEMENT

ಭಾಷಾಂತರ ಕೌಶಲದಿಂದ ಉದ್ಯೋಗಾವಕಾಶ: ಪ್ರೊ.ಲಕ್ಷ್ಮೀನಾರಾಯಣ ಅರೋರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 16:07 IST
Last Updated 31 ಜನವರಿ 2023, 16:07 IST
ಮೈಸೂರಿನ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ ಭಾಷಾಂತರ ಕುರಿತ ವಿಚಾರಸಂಕಿರಣದಲ್ಲಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಲಕ್ಷ್ಮೀನಾರಾಯಣ ಅರೋರ ಮಾತನಾಡಿದರು
ಮೈಸೂರಿನ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ನಡೆದ ಭಾಷಾಂತರ ಕುರಿತ ವಿಚಾರಸಂಕಿರಣದಲ್ಲಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಲಕ್ಷ್ಮೀನಾರಾಯಣ ಅರೋರ ಮಾತನಾಡಿದರು   

ಮೈಸೂರು: ‘ಭಾಷಾಂತರ ಕೌಶಲ ಅವಶ್ಯವಲ್ಲ ಇಂದಿನ ಅನಿವಾರ್ಯವಾಗಿದೆ. ಇದು ಅನೇಕ ಉದ್ಯೋಗಾವಕಾಶಕ್ಕೆ ಕಾರಣವಾಗಿದೆ’ ಎಂದು ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಲಕ್ಷ್ಮೀನಾರಾಯಣ ಅರೋರ ಹೇಳಿದರು.

ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದಿಂದ ಮಂಗಳವಾರ ಆಯೋಜಿಸಿದ್ದ ‘ಭಾಷಾಂತರ, ಸಾಹಿತ್ಯ ಮತ್ತು ಉದ್ಯೋಗಾವಕಾಶ’ ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ನಾವೆಲ್ಲರೂ ಭಾಷಾಂತರದ ವಿದ್ಯಾರ್ಥಿಗಳೆ ಆಗಿದ್ದೇವೆ. ಭಾಷಾಂತರವಿಲ್ಲದೆ ಏನೂ ನಡೆಯುವುದಿಲ್ಲ. ಆದ್ದರಿಂದ ಈ ತರಬೇತಿಯನ್ನು ತರಗತಿಗಳಲ್ಲಿ ನೀಡುವಂತಾಗಬೇಕು. ಎನ್‌ಇಪಿ–2020 ಅಡಿಯಲ್ಲಿ ಭಾಷೆ ಕಲಿಕೆಗೆ ಅದ್ಯತೆ ನೀಡಿದ್ದು, ಭಾಷಾಂತರಕ್ಕೆ ಪ್ರಾಮುಖ್ಯತೆ ಕೊಡಲಾಗಿದೆ’ ಎಂದರು.

ADVERTISEMENT

‘ಇಂದಿನ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಮಾತೃ ಭಾಷೆಯಲ್ಲಿ ಕಲಿಸುವುದು ಕಷ್ಟಸಾಧ್ಯವಾಗಿದೆ. ಆದ್ದರಿಂದ ಇಂದು ಭಾಷಾಂತರ ಎಲ್ಲಾ ಕ್ಷೇತ್ರಗಳ ತುರ್ತಾಗಿದೆ” ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ, ‘ಭಾಷಾಂತರ ಇಂದಿನ ಅಗತ್ಯವಾಗಿದೆ. ರೇಡಿಯೊ, ಟಿವಿ ಮೊದಲಾದ ಸಮೂಹ ಮಾಧ್ಯಮಗಳಲ್ಲಿ ಭಾಷಾಂತರ ಕೌಶಲವುಳ್ಳವರಿಗೆ ಬಹು ಬೇಡಿಕೆ ಇದೆ. ಹೀಗಾಗಿ, ವೃತ್ತಿ, ಹವ್ಯಾಸಿ ಭಾಷಾಂತರಕಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಕಲಿಕೆಗೆ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

ಡಾ.ಉದಯರವಿ ಶಾಸ್ತ್ರಿ, ಡಾ.ಎಸ್.ವಿ.ಕ್ರುಜ್, ಡಾ.ಎಂ.ಗಿರಿಜಮ್ಮ ಉಪನ್ಯಾಸ ನೀಡಿದರು. 9 ಅಧ್ಯಾಪಕರು ಭಾಷಾಂತರಕ್ಕೆ ಸಂಬಂಧಿಸಿದ ವಿಷಯ ಮಂಡಿಸಿದರು.

ಪ್ರಾಚಾರ್ಯ ಪ್ರೊ.ಎಂ.ಪಿ. ವಿಜಯೇಂದ್ರ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.