ADVERTISEMENT

ಪ್ರವಾಸಿಗರ ಮೇಲೆ ಹಾಡಹಗಲೇ ಹಲ್ಲೆ

ನಗರದ ಹೃದಯ ಭಾಗದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:11 IST
Last Updated 20 ಮೇ 2019, 20:11 IST

ಮೈಸೂರು: ನಗರದ ಹೃದಯ ಭಾಗದಲ್ಲಿ ಹಾಡಹಗಲೇ ಪ್ರವಾಸಿಗರ ಮೇಲೆ ಮದ್ಯಪಾನ ಮಾಡಿದ ನಾಲ್ವರು ಹಲ್ಲೆ ನಡೆಸಿದ್ದಾರೆ. ಜತೆಗೆ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ನಾಲ್ವರ ಪೈಕಿ ಒಬ್ಬ ಆರೋಪಿ ಚಂದು ಎಂಬಾತನನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಿಂದ ಟಿ.ಟಿ ವಾಹನದಲ್ಲಿ ಭಾನುವಾರ ಬಂದ ಪ್ರವಾಸಿಗರು ಚಾಮುಂಡಿಬೆಟ್ಟದಿಂದ ಕೆ.ಆರ್.ಎಸ್‌ಗೆ ಹೋಗುವ ಮಾರ್ಗಮಧ್ಯೆ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಚಾಮರಾಜ ನೂರಡಿ ರಸ್ತೆಯಲ್ಲಿ ತಾತಯ್ಯ ವೃತ್ತದ ಸಿಗ್ನಲ್ (ಶಾಂತಲಾ ಸಿನಿಮಾ ಮಂದಿರದ ಬಳಿ) ಬಳಿ ವಾಹನ ನಿಲ್ಲಿಸಿದ್ದಾರೆ. ರಸ್ತೆ ಬದಿ ಮದ್ಯಸೇವಿಸುತ್ತ ಕುಳಿತಿದ್ದ ನಾಲ್ವರು ವಾಹನದಲ್ಲಿದ್ದ ಮಹಿಳೆಯರನ್ನು ಚುಡಾಯಿಸಿ, ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ. ಇದರಿಂದ ಕೋಪಗೊಂಡ ಪ್ರವಾಸಿಗರು ಪ್ರಶ್ನಿಸಿದ್ದಾರೆ.

ಇದರಿಂದ ಕೆರಳಿದ ದುಷ್ಕರ್ಮಿಗಳು ಪ್ರವಾಸಿಗರ ಪೈಕಿ ಕಾರ್ತೀಕ್, ಪರಮೇಶ್, ಮುರುಳಿ, ಸೆಲ್ವಂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ರಸ್ತೆ ವಿಭಜಕದಲ್ಲಿ ಇಡಲಾಗಿದ್ದ ಹೂಕುಂಡಗಳ ಗಿಡಗಳನ್ನು ಕಿತ್ತುಕೊಂಡು ಹೊಡೆದಿದ್ದಾರೆ. ಬಿಯರ್ ಬಾಟಲಿಗಳನ್ನು ಪ್ರವಾಸಿಗರ ಮೇಲೆ ಎಸೆದಿದ್ದಾರೆ. ಮಹಿಳೆಯರ ಬಟ್ಟೆಗಳನ್ನು ಹಿಡಿದು ಎಳೆದಾಡಿದ್ದಾರೆ. ಇದರಿಂದ ಗಾಯಗೊಂಡ ಐವರು ಪ್ರವಾಸಿಗರನ್ನು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಕಳುಹಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬಾತನನ್ನು ಬಂಧಿಸಲಾಗಿದೆ, ಉಳಿದ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‍ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.