ಅಮಾನತು
ಪಿರಿಯಾಪಟ್ಟಣ: ಪ್ರತ್ಯೇಕ ಆರೋಪದ ಅಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮತ್ತು ಶಿಕ್ಷಕ ರಾಮಚಂದ್ರ ಹಾಗೂ ಕ್ಷೇತ್ರ ಸಂಪನ್ಮೂಲ ಕಚೇರಿಯ ಬಿಐಇಆರ್ಟಿ ಎಸ್.ಬಿ. ಪುಟ್ಟರಾಜು ಅವರನ್ನು ಅಮಾನತು ಮಾಡಿ ಶಿಕ್ಷಣ ಇಲಾಖೆ ಡಿಡಿಪಿಐ ಡಿ. ಉದಯಕುಮಾರ್ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಲಕ್ಷ್ಮೀಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ ಶಿಕ್ಷಕರ ಸಭಾಂಗಣ ಸಮಿತಿ ಜಂಟಿಖಾತೆಯ ನಿರ್ವಹಣೆಯಲಿ ಲೆಕ್ಕದ ವಿವರ ಮುಚ್ಚಿಟ್ಟು ಹಣದುರುಪಯೋಗ ಪಡಿಸಿಕೊಂಡಿದ್ಧಾರೆ ಎಂದು ನಿವೃತ್ತ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಪಿ.ಚಂದ್ರಪ್ಪ ಮತ್ತು ವಕೀಲ ಎನ್.ಎಸ್.ಲೋಕೇಶ ದೂರು ನೀಡಿದ್ದು. ಈ ವಿಚಾರವಾಗಿ ವಿಚಾರಣೆ ನಡೆದು ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಈ ಹಿಂದೆ ಕರ್ತವ್ಯದಿಂದ ಅಮಾನತುಗೊಳಿಸಲಾಗಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (ಕೆಇಟಿ) ಆಕ್ಷೇಪ ವ್ಯಕ್ತಪಡಿಸಿ ದಾವೆ ಹೂಡಿದ್ದು ಇಲಾಖೆ ವಿಚಾರಣೆ ನಡೆಸಿದ ನಂತರ ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ನಿಯಮಾನುಸಾರ ಅಗತ್ಯ ಶಿಸ್ತಿನ ಕ್ರಮ ಜರುಗಿಸಲು ಆದೇಶ ನೀಡಿತ್ತು.
ಈ ಬಗ್ಗೆ ತನಿಖೆ ನಡೆದು ತನಿಖಾ ತಂಡದ ವರದಿಯಂತೆ ರಾಮಚಂದ್ರು ಸಹ ಶಿಕ್ಷಕರು ಅವರು ನಿಯಮಬಾಹಿರವಾಗಿ ಆರ್ಥಿಕ ಅಶಿಸ್ತು ತೋರಿಸಿರುವ ಬಗ್ಗೆ ಸ್ಪಷ್ಟ ವರದಿ ನೀಡಿದ್ದು. ಅಧಿಕಾರದ ವ್ಯಾಪ್ತಿ ಮೀರಿ ನಿರ್ಣಯಗಳನ್ನು ತೆಗೆದುಕೊಂಡಿರುವುದು, ನಗದು ವಹಿಗೆ ತಾವೇ ಸಹಿ ಮಾಡಿರುವುದು, ಖರ್ಚಿನ ರಶೀದಿಗಳಿಗೆ ತಾವೇ ಸಹಿ ಮಾಡಿರುವುದು, ಕಾಮಗಾರಿ ಪೂರ್ಣಗೊಂಡಿರುವ ಧೃಢೀಕರಣ ಪತ್ರದಲ್ಲೂ ಅಧಿಕಾರ ವ್ಯಾಪ್ತಿ ಮೀರಿ ಧೃಡೀಕರಿಸಿ ಸಹಿ ಮಾಡಿರುವುದು ಹಾಗೂ ಹಿಂದಿನ ಲೆಕ್ಕ ಪತ್ರದ ದಾಖಲೆಗಳನ್ನು ಮುಚ್ಚಿಡುವ ಮೂಲಕ ಹಣ ದೂರುಪಯೋಗಕ್ಕೆ ಕಾರಣ ಹಾಗೂ ಗುರುಭವನ ನಿರ್ಮಾಣ ಸಂದರ್ಭದಲ್ಲಿ ಹಿಂದಿನ ಮಾಹಿತಿ ನೀಡದೆ ಎರಡೆರಡು ಖಾತೆಗಳು ಪ್ರಾರಂಭವಾಗಲು ಕಾರಣ ಮತ್ತು ದೂರುದಾರರ ಮೇಲೆ ಪ್ರಭಾವ ಬಳಿಸಿರುವ ಆರೋಪದಡಿ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಆಮಾನತು ಮಾಡಿರುವುದಾಗಿ ಜ.20 ರಂದು ಶಾಲಾ ಶಿಕ್ಷಣ ಇಲಾಖೆ ಶಿಸ್ತು ಪ್ರಾಧಿಕಾರದ ಮುಖ್ಯಸ್ಥ ಹಾಗೂ ಉಪನಿರ್ದೇಶಕರು ಆಡಳಿತ ಡಿ. ಉದಯ ಕುಮಾರ್ ಆದೇಶ ಮಾಡಿದ್ಧಾರೆ.
ಚುನಾವಣೆಯಲ್ಲಿ ಭಾಗಿ:
ಮತ್ತೊಬ್ಬ ಶಿಕ್ಷಕ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯ ಬಿಐಇಆರ್ಟಿ ಎಸ್.ಬಿ.ಪುಟ್ಟರಾಜು ನಿರ್ದಿಷ್ಟ ಪಡಿಸಿದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವವರು ಯಾವುದೇ ಸಂಘ ಸಂಸ್ಥೆಗಳಲ್ಲಿ ಸ್ಪರ್ಧಿಸಬಾರದು ಹಾಗೂ ಸದರಿ ಸಂಘದ ಸಂಸ್ಥೆಗಳ ಪದಾಧಿಕಾರಿಗಳಾಗಿರ ಬಾರದು ಎಂಬ ನಿಯಮವನ್ನು ಉಲ್ಲಂಘಿಸಿ ಅಧಿಕೃತ ಜ್ಞಾಪನದ ವಿರುದ್ಧ 2025ರ ಅಕ್ಟೋಬರ್ನಲ್ಲಿ ನಡೆದ ಸರ್ಕಾರಿ ನೌಕರರ ಸಂಘಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಸಂಘದ ಕ್ಯಾಲೆಂಡರ್ಗಳಲ್ಲಿ ಇರುವ ನಿರ್ದೇಶಕರು ಎಂದು ಸ್ಪಷ್ಟವಾಗಿ ನಮೂದಿಸಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.