ADVERTISEMENT

ಶಾಸಕರ ವಿರುದ್ಧ ಉಪ್ಪಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 6:26 IST
Last Updated 12 ನವೆಂಬರ್ 2020, 6:26 IST
ಪಿರಿಯಾಪಟ್ಟಣದಲ್ಲಿ ತಾಲ್ಲೂಕು ಉಪ್ಪಾರ ಸಮಾಜದವರು ಶಾಸಕ ಕೆ.ಮಹದೇವ್ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು
ಪಿರಿಯಾಪಟ್ಟಣದಲ್ಲಿ ತಾಲ್ಲೂಕು ಉಪ್ಪಾರ ಸಮಾಜದವರು ಶಾಸಕ ಕೆ.ಮಹದೇವ್ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು   

ಪಿರಿಯಾಪಟ್ಟಣ: ಶಾಸಕರು ಬಿಜೆಪಿ ಉಪ್ಪಾರ ಸಮಾಜದ ಮುಖಂಡರ ವಿರುದ್ಧ ನೋವುಂಟಾಗುವಂತೆ ಪದ ಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿ ಬುಧವಾರ ಉಪ್ಪಾರ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಎಪಿಎಂಸಿ ಬಳಿಯಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು ಬಿ.ಎಂ. ರಸ್ತೆಯ ಮೂಲಕ ಸಾಗಿ ತಾಲ್ಲೂಕು ಕಚೇರಿಯವರೆಗೆ ತೆರಳಿ ತಹಶೀಲ್ದಾರ್ ಶ್ವೇತಾ ಎನ್. ರವೀಂದ್ರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿ.ಎಚ್. ವಿಜಯಶಂಕರ್ ಮಾತನಾಡಿ, ‘ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರಿಂದ ಬಿಜೆಪಿ ಮುಖಂಡನ ವಿರುದ್ಧ ಮನಸ್ಸಿಗೆ ನೋವುಂಟು ಮಾಡುವಂತಹ ಪದ ಬಳಕೆಯಾಗದಿರುವುದು ಬೇಸರದ ಸಂಗತಿ’ ಎಂದರು.

ADVERTISEMENT

‘2013 ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಸಣ್ಣಮೊಗೆ ಗೌಡರ ಕುರಿತು ಶಾಸಕ ಕೆ.ಮಹದೇವ್ ಮಾಡಿದ ಪದ ಬಳಕೆ ಸರಿಯಾದದ್ದಲ್ಲ. ಸಣ್ಣಮೊಗೇಗೌಡರು ದರಿದ್ರ ಅಲ್ಲ ಅವರೊಬ್ಬ ಶ್ರೇಷ್ಠ ಸ್ವಾಭಿಮಾನಿಯಾಗಿದ್ದರು’ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಬಿಜೆಪಿ ಸಂಘಟನೆಯಲ್ಲಿ ಡಾ.ಕೆ.ಆರ್.ತಮ್ಮಯ್ಯ, ಬಸವರಾಜಪ್ಪ, ಸಣ್ಣಮೊಗೇಗೌಡ ಮತ್ತು ಬಿ.ಆರ್.ನಾರಾಯಣರಾವ್ ಪ್ರಮುಖರಾಗಿದ್ದು ಈ ನಾಲ್ವರು ತಾಲ್ಲೂಕಿನಲ್ಲಿ ಬಿಜೆಪಿಯ ಆಧಾರ ಸ್ತಂಭಗಳಾಗಿದ್ದರು ಎಂದು ಸ್ಮರಿಸಿದರು.

ಮುಂದಿನ ದಿನಗಳಲ್ಲಿ ಈ ರೀತಿಯ ವರ್ತನೆಗಳು ಪುನರಾವರ್ತನೆ ಆಗಬಾರದು ಎನ್ನುವ ಉದ್ದೇಶದಿಂದ ಈ ಪ್ರತಿಭಟನೆಯ ಮೂಲಕ ಎಚ್ಚರಿಕೆ ನೀಡಲಾಗುತ್ತಿತ್ತು ಇನ್ನಾದರೂ ಜವಾಬ್ದಾರಿಯುತ ವ್ಯಕ್ತಿ ತಮ್ಮ ವರ್ತನೆಯನ್ನು ತಿದ್ದಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಜಯಶಂಕರ್, ಭಗೀರಥ ಉಪ್ಪಾರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್.ವಿಷಕಂಠಯ್ಯ, ಮಾಜಿ ಶಾಸಕ ಎಚ್.ಸಿ.ಬಸವರಾಜು, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಪ್ರಕಾಶ್ ಬಾಬುರಾವ್, ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್, ದಸಂಸ ಮುಖಂಡ ಕರಡಿಪುರಕುಮಾರ್, ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ರವಿಕುಮಾರ್, ಉಪ್ಪಾರ ಸಮಾಜದ ಮುಖಂಡರಾದ ತ್ರಿನೇಶ್, ಮಂಜು, ವೀರಭದ್ರ, ಶಿವರುದ್ರ, ಅನಿಲ್ ಕುಮಾರ್, ಸೋಮಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.