ಕೆ.ಆರ್.ನಗರ: ‘ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಮರಣೋತ್ತರ ಜ್ಞಾನಪೀಠ ಪ್ರಶಸ್ತಿ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಡಿಂಡಿಮ ಶಂಕರ್ ಸರ್ಕಾರಕ್ಕೆ ಮನವಿ ಮಾಡಿದರು.
ಇಲ್ಲಿನ ರೋಟರಿ ಕ್ಲಬ್ನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈಚೆಗೆ ನಡೆದ ಎಸ್.ಎಲ್.ಭೈರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಾಹಿತ್ಯ ಲೋಕದ ದಿಗ್ಗಜರಾಗಿದ್ದ ಎಸ್.ಎಲ್.ಭೈರಪ್ಪ ಅವರು, ಯಾವುದೇ ವಿವಾದ ಟೀಕೆ ಟಿಪ್ಪಣಿಗಳಿಗೆ ಜಗ್ಗುತ್ತಿರಲಿಲ್ಲ. ಲೇಖಕರು ಉತ್ಸವ ಮೂರ್ತಿಯಾಗದೆ ಗರ್ಭಗುಡಿಯೊಳಗಿನ ಮೂರ್ತಿಯಾಗಿರಬೇಕು ಎಂಬ ನಿಲುವು ಹೊಂದಿದ್ದರು. ಎಸ್.ಎಲ್.ಭೈರಪ್ಪ ಅವರು ತಮ್ಮದೇ ಆದ ಓದುಗ ಬಳಗ ಹೊಂದಿದ್ದರು’ ಎಂದರು.
ಅವರ ಆದರ್ಶ, ಮೌಲ್ಯ, ವಿಚಾರಧಾರೆಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಿದೆ. ಅವರ ಸೇವೆಯನ್ನು ಸ್ಮರಿಸಿ ಸರ್ಕಾರ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಟಿ.ಎನ್.ದಯಾನಂದ, ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷ ಗೋಪಾಲ್ ರಾವ್ ಕದಂ, ಬಿಜೆಪಿ ಮಾಧ್ಯಮ ವಕ್ತಾರ ಬ್ಯಾಡರಹಳ್ಳಿ ಗೋಪಾಲ್ ರಾಜ್, ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ವಿ.ಮೋಹನ್ ಕುಮಾರ್, ನಿವೃತ್ತ ಉಪನ್ಯಾಸಕ ಕೃಷ್ಣ ಮಾತನಾಡಿದರು.
ರೈತ ಮುಖಂಡ ಜೆ.ಎಂ.ಕುಮಾರ್, ಪುರಸಭೆ ಯೋಗೇಶ್, ಒಕ್ಕಲಿಗರ ಸಂಘದ ನಿರ್ದೇಶಕ ಮಿರ್ಲೆ ರಾಧಾಕೃಷ್ಣ, ರೋಟರಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ಅಶೋಕ್, ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ್, ಬಿಎಸ್ಎನ್ಎಲ್ ಕೃಷ್ಣ, ಮಂಜುನಾಥ್, ಬೀರನಹಳ್ಳಿ ರಾಮರಾಜು, ಶೇಷಾದ್ರಿ, ಶಿಕ್ಷಕ ರಾಜು, ಸಿದ್ದರಾಜು, ರಾಮಶೆಟ್ಟಿ, ಬ್ಯಾಂಕ್ ರಾಮೇಗೌಡ, ಲೋಕೇಶ್, ಚಂದ್ರಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.