ADVERTISEMENT

ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕೊಟ್ಟ ಅರಸು: ಸಂಸದ ಆರ್‌.ಧ್ರುವನಾರಾಯಣ

ವಿಶ್ಲೇಷಣೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 14:16 IST
Last Updated 10 ಡಿಸೆಂಬರ್ 2018, 14:16 IST
ಮೈಸೂರಿನಲ್ಲಿ ನಡೆದ ದೇವರಾಜ ಅರಸು ಹಾಗೂ ರಾಜೀವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಧ್ರುವನಾರಾಯಣ ಪುಷ್ಪಾರ್ಚನೆ ಮಾಡಿದರು. ಬಿ.ಜೆ.ವಿಜಯಕುಮಾರ್‌, ಪುಷ್ಪಾ ಅಮರನಾಥ್ ಇದ್ದಾರೆ
ಮೈಸೂರಿನಲ್ಲಿ ನಡೆದ ದೇವರಾಜ ಅರಸು ಹಾಗೂ ರಾಜೀವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಧ್ರುವನಾರಾಯಣ ಪುಷ್ಪಾರ್ಚನೆ ಮಾಡಿದರು. ಬಿ.ಜೆ.ವಿಜಯಕುಮಾರ್‌, ಪುಷ್ಪಾ ಅಮರನಾಥ್ ಇದ್ದಾರೆ   

ಮೈಸೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಸಿಗುವಂತೆ ನೋಡಿಕೊಂಡ ಡಿ.ದೇವರಾಜ ಅರಸು ಅವರು ಮಾದರಿ ರಾಜಕಾರಣಿ ಎಂದು ಸಂಸದ ಆರ್‌.ಧ್ರುವನಾರಾಯಣ ಅಭಿ‍ಪ್ರಾಯಪಟ್ಟರು.

ಕಾಂಗ್ರೆಸ್‌ ನಗರ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ದಿ.ರಾಜೀವ ಗಾಂಧಿ ಹಾಗೂ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವರಾಜ ಅರಸರು ಅತಿ ಹೆಚ್ಚು ಕಾಲ ಆಡಳಿತದಲ್ಲಿ ಇದ್ದವರು. ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು. ಹಿಂದುಳಿದ ವರ್ಗಗಳಿಗಾಗಿ ದುಡಿದು ರಾಜ್ಯವನ್ನು ಕಟ್ಟಿದ ಧೀಮಂತ ಮುಖ್ಯಮಂತ್ರಿಯವರು. ಆ ಮೂಲಕ ರಾಜ್ಯದ ಜನತೆ ಹಾಗೂ ಯುವ ರಾಜಕಾರಣಿಗಳಿಗೆ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಸ್ಮರಿಸಿದರು.

ADVERTISEMENT

ರಾಜೀವ ಗಾಂಧಿಯವರು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವರು. ಪ್ರಧಾನಿಯಾಗಿ ಅವರ ಕಾಣಿಕೆ ಹಿರಿದು. ಪಂಚಾಯತ್ ರಾಜ್ ವ್ಯವಸ್ಥೆ ಬಲ‍ಪಡಿಸಿದ್ದು, ಮಾಹಿತಿ ತಂತ್ರಜ್ಞಾನವನ್ನು ಪರಿಚಯಿಸಿದ್ದು ಅವರ ಕಾಣಿಕೆ. ದೇವರಾಜ ಅರಸರು ಹೊಂದಿದ್ದ ಜನಪರ ಕಾಳಜಿಯಿಂದ ರಾಜೀವ ಗಾಂಧಿ ಅವರ 20 ಅಂಶಗಳ ಯೋಜನೆ ಯಶಸ್ವಿಯಾಯಿತು ಎಂದು ಇಬ್ಬರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖಂಡ ಸಿ.ಎಚ್‌.ವಿಜಯಶಂಕರ್‌ ಮಾತನಾಡಿ, ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕ್ರಾಂತಿಕಾರದ ಹೆಜ್ಜೆಗಳನ್ನು ಇರಿಸಿದವರು ಅರಸರು. ಇಂದಿನ ರಾಜಕಾರಣಿಗಳು ಈ ಕುರಿತು ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದು ಅವರು ವಿಶ್ಲೇಷಿಸಿದರು.

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಲಕ್ಷ್ಮಿನಾರಾಯಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮುಖಂಡರಾದ ವಾಸು, ಕಳಲೆ ಕೃಷ್ಣಮೂರ್ತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪಾಲಿಕೆ ಸದಸ್ಯ ಆರೀಫ್ ಹುಸೇನ್, ನಗರ ಒಬಿಸಿ ಘಟಕದ ಅಧ್ಯಕ್ಷ ಶಿವಮಲ್ಲು, ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಉದಯ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.