ADVERTISEMENT

ಮೈಸೂರು: ಕಬ್ಬು ಮಂಡಳಿಗೆ ಮುತ್ತಿಗೆ ಆಗಸ್ಟ್ 21ಕ್ಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2023, 13:30 IST
Last Updated 14 ಆಗಸ್ಟ್ 2023, 13:30 IST

ಮೈಸೂರು: ‘ಕಬ್ಬಿನ ಎಫ್ಆರ್‌ಪಿ ನಿಗದಿಯಲ್ಲಿ ಇಳುವರಿ ಪ್ರಮಾಣ 8.5ಕ್ಕೆ ಇಳಿಸಬೇಕು. ಎಸ್‌ಎಪಿ ದರವನ್ನು ಟನ್‌ಗೆ ಕನಿಷ್ಠ ₹500 ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ, ಆ.21ರಂದು ಬೆಂಗಳೂರಿನ ಕಬ್ಬು ನಿಯಂತ್ರಣ ಮಂಡಳಿಗೆ ಮುತ್ತಿಗೆ ಹಾಕಲಿದ್ದೇವೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಎಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಳೆದ ಸಾಲಿನಲ್ಲಿ ನೀಡಬೇಕಿದ್ದ ಟನ್‌ಗೆ ₹150 ಹೆಚ್ಚುವರಿ ಹಣ ಇನ್ನೂ ಸಂದಾಯವಾಗಿಲ್ಲ. ಕೂಡಲೇ, ಹಳೇ ಬಾಕಿ ನೀಡಬೇಕು. ಉತ್ತರ ಕರ್ನಾಟಕದಂತೆ ಇಲ್ಲಿಯೂ ಸಕ್ಕರೆ ಕಾರ್ಖಾನೆಯಿಂದಲೇ ಕಬ್ಬು ಕಟಾವಿಗೆ ನಿರ್ದೇಶಿಸಬೇಕು. ಸಂಘದ ಎಲ್ಲ ಮುಖಂಡರು ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ ಸಾಲಿನಲ್ಲಿ ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿಯಲ್ಲಿ ಸರ್ಕಾರದ ಆದೇಶದಂತೆ ₹150 ಹೆಚ್ಚುವರಿ ಹಣ ನೀಡಿಲ್ಲ. ಜತೆಗೆ ಟನ್‌ ಕಬ್ಬಿಗೆ ₹24.70ನಷ್ಟು ಕಡಿಮೆ ದರ ನಿಗದಿ ಮಾಡಿ ನಷ್ಟ ಉಂಟುಮಾಡಿದ್ದಾರೆ. ಇವೆರಡನ್ನೂ ನೀಡುವಂತೆ ಸರ್ಕಾರ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಆ.17ರಂದು, ಕೋಚನಹಳ್ಳಿ ರೈತರಿಗಾದ ಭೂವಂಚನೆಯನ್ನು ಸರಿಪಡಿಸಲು ಆಗ್ರಹಿಸಿ, ಅಧಿಕಾರಿಗಳ ನಿಷ್ಕ್ರಿಯತೆ ವಿರೋಧಿಸಿ ಎಸ್‌ಪಿ ಕಚೇರಿಗೆ ಕೋಚನಹಳ್ಳಿಯಿಂದ ಪಾದಯಾತ್ರೆ ತೆರಳಿ ಮುತ್ತಿಗೆ ಹಾಕಲಾಗುವುದು’ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಮಾತನಾಡಿ, ‘ಹನಗೋಡು ಹೋಬಳಿಯ ಕಡೆಮನುಗನಹಳ್ಳಿಯಲ್ಲಿ ರೈತರೊಬ್ಬರ ಅಡಿಕೆ ತೋಟದಲ್ಲಿ 600 ಮರಗಳನ್ನು ದುಷ್ಕರ್ಮಿ ಕಡಿದು ಹಾಕಿದ್ದು, ಪೊಲೀಸರೂ ಸಮಗ್ರ ತನಿಖೆ ಮಾಡದೇ, ಬೇಜಾವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಗುರು ಲಿಂಗೇಗೌಡ, ತಾಲ್ಲೂಕು ಅಧ್ಯಕ್ಷ ಪ್ರಭಾಕರ್‌, ಮಂಡ್ಯ ಜಿಲ್ಲಾಧ್ಯಕ್ಷ ಕೆಂಪುಗೌಡ, ರೈತ ಮುಖಂಡರಾದ ಪ್ರಸನ್ನ ಎನ್.ಗೌಡ, ಬಿಳಿಗೆರೆ ರಾಮಲಿಂಗೇಗೌಡ, ಬೊಕ್ಕಳ್ಳಿ ನಂಜುಂಡಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.