ಮೈಸೂರು: ‘ಆಧುನಿಕ ತಂತ್ರಜ್ಞಾನಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಯುವ ಸಮೂಹವು ಪುಸ್ತಕಗಳ ಓದಿನಿಂದ ವಿಮುಖವಾಗುತ್ತಿದೆ. ಇದರಿಂದ ಸೃಜನಶೀಲತೆ ನಾಶವಾಗುತ್ತಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಿ. ಸೋಮಶೇಖರ್ ವಿಷಾದಿಸಿದರು.
ಗಾಯತ್ರಿ ಎಂಟರ್ಪ್ರೈಸಸ್ ಹಾಗೂ ಕನ್ನಡ ಸಾಹಿತ್ಯ ಕಲಾ ಕೂಟದಿಂದ ನಗರದ ರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಎಸ್.ಎಂ.ಜಂಬುಕೇಶ್ವರ ವಿರಚಿತ ‘ವರ್ಣದಿಂದ ವಿಶ್ವದೆಡೆಗೆ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಯುವಕರು ಅಧ್ಯಯನಶೀಲರಾಗಿ, ಜ್ಞಾನ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಜ್ಞಾನವು ಎಲ್ಲ ಕಡೆಯೂ ಒಪ್ಪಿತವಾಗುವ ‘ನಗದು’ ಇದ್ದಂತೆ’ ಎಂದರು.
ಪತ್ರಕರ್ತ ಡಾ.ಎಂ.ಮಹ್ಮದ್ ಭಾಷಾ ಕೃತಿ ಕುರಿತು ಮಾತನಾಡಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪ್ರಕಾಶಕರಾದ ಎಂ.ಎಸ್. ಕಾರ್ತಿಕ್ ಮತ್ತು ಡಾ.ಶೈಲಜಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.