ಹುಣಸೂರು: ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಕುಟುಂಬಕ್ಕೆ ಆಹಾರ ಕಿಟ್ ವಿತರಿಸುವ ಮೂಲಕ ವಿಜಯ ದಶಮಿಯನ್ನು ದಸಂಸ ತಾಲ್ಲೂಕಿನ ಕಟ್ಟೆಮಳಲವಾಡಿಯಲ್ಲಿ ಆಚರಿಸಲಾಗಿದೆ ಎಂದು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ತಿಳಿಸಿದ್ದಾರೆ.
ಗ್ರಾಮದಲ್ಲಿ ಕಳೆದ ಹಲವು ವರ್ಷದಿಂದ ವಾಸಿಸುತ್ತಿರುವ ನಿರ್ಗತಿಕ ಕುಟುಂಬಕ್ಕೆ ಸ್ಥಳೀಯ ಆಡಳಿತ ಸ್ಪಂದಿಸದೆ, ಮೂಲ ಸವಲತ್ತು ಇಲ್ಲವಾಗಿದ್ದು, ಈ ಕುಟುಂಬಕ್ಕೆ ದಸಂಸ ಸಹಾಯ ಹಸ್ತ ಚಾಚಿ ಸವಲತ್ತು ನೀಡಿ ಬದುಕು ಕಟ್ಟಿಕೊಳ್ಳಲು ಅಶ್ರಯವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗ್ರಾಮದ ನಿವಾಸಿ ಭಾಗ್ಯ ತಮ್ಮ 6 ಮಕ್ಕಳೊಂದಿಗೆ ವಾಸಿಸುತ್ತಿದ್ದು, ಈಕೆಯ ಪತಿ ಮದ್ಯವ್ಯಸನಿಯಾಗಿ ಸಂಸಾರ ಬೀದಿಗೆ ಬಂದಿದೆ. ದಿಕ್ಕು ಇಲ್ಲದ ಕುಟುಂಬದವರಿಗೆ ದಸಂಸ ಧ್ವನಿಯಾಗಿ ಸರ್ಕಾರದ ಸವಲತ್ತು ದೊರಕಿಸಿಕೊಡುವಲ್ಲಿ ಶ್ರಮಿಸಿದೆ ಎಂದು ಹೇಳಿದ್ದಾರೆ.
ಈ ಕುಟುಂಬಕ್ಕೆ ಮನೆ ಇಲ್ಲದೆ ಗ್ರಾಮದ ಮುಸ್ಲಿಂ ಸಮುದವರ ಮನೆಯಲ್ಲಿ ವಾಸಿಸುತ್ತಿದ್ದು, ಈಕೆಯ ಮಕ್ಕಳಿಗೆ ದಸಂಸ ಸರ್ಕಾರಿ ಶಾಲೆಯಲ್ಲಿ ದಾಖಲಿಸಿ ವ್ಯಾಸಂಗಕ್ಕೆ ಎಲ್ಲಾ ವ್ಯವಸ್ಥೆ ಕಲ್ಪಿಸಿದೆ. ಸರ್ಕಾರದ ಅನ್ನಭಾಗ್ಯ ಯೋಜನೆ ಪಡೆಯಲು ಇವರಿಗೆ ಪಡಿತರ ಕಾರ್ಡ್ ಇಲ್ಲದ ಕಾರಣ ಗ್ರಾಮದ ನಿವಾಸಿ ಕಾಳಮ್ಮ ಅವರಿಗೆ ಸಿಗುವ ಅನ್ನಭಾಗ್ಯ ಅಕ್ಕಿಯನ್ನು ಕುಟುಂಬದವರಿಗೆ ನೀಡಿದ್ದಾರೆ. ಈ ಕುಟುಂಬಕ್ಕೆ ಸರ್ಕಾರಿ ಯೋಜನೆ ತಲಪಿಸುವ ದಿಕ್ಕಿನಲ್ಲಿ ದಸಂಸ ಕಾರ್ಯಪ್ರವೃತ್ತವಾಗಿದ್ದು, ಸ್ಥಳಿಯ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಂದಿಸಬೇಕಾಗಿದೆ ಎಂದಿದ್ದಾರೆ.
ಈ ಸಂಬಂಧ ತಹಶೀಲ್ದಾರ್ ಗಮನಕ್ಕೆ ತಂದಿದ್ದು, ವಾರದೊಳಗೆ ಪಡಿತರ ಕಾರ್ಡ್ ವಿತರಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.