ADVERTISEMENT

ವಿಜಯ ರಾಘವನ್‌ಗೆ ಸಂಗೀತ ವಿದ್ವಾನ್ ಪ್ರಶಸ್ತಿ

ಪ್ರಜ್ವಲಿಸುತ್ತಿರುವ ಅರಮನೆ ಎದುರು ಸಾಂಸ್ಕೃತಿಕ ಸಿರಿತನ; ಪರಂಪರೆ ಪಸರಿಸಲು ಮುಂದಾಗಲು ಸಲಹೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:41 IST
Last Updated 29 ಸೆಪ್ಟೆಂಬರ್ 2019, 19:41 IST
ಸಂಗೀತ ವಿದ್ವಾನ್‌... ಮೈಸೂರು ಅರಮನೆ ಎದುರಿನ ವೇದಿಕೆಯಲ್ಲಿ ಭಾನುವಾರ ವಿದ್ವಾನ್ ಪ್ರೊ.ಬಿ.ಎಸ್.ವಿಜಯ ರಾಘವನ್ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಸಚಿವ ಸಿ.ಟಿ.ರವಿ ಪ್ರದಾನ ಮಾಡಿದರು. ಎಸ್‌.ಎ.ರಾಮದಾಸ್‌, ವಿಜಯ ರಾಘವನ್‌ ಪತ್ನಿ ಜಯಲಕ್ಷ್ಮಿ, ಪುಷ್ಪಲತಾ, ಆರ್‌.ಅಶೋಕ, ವಿ.ಸೋಮಣ್ಣ, ಸಂಸದ ಎಸ್‌.ಮುನಿಸ್ವಾಮಿ ಇದ್ದಾರೆ
ಸಂಗೀತ ವಿದ್ವಾನ್‌... ಮೈಸೂರು ಅರಮನೆ ಎದುರಿನ ವೇದಿಕೆಯಲ್ಲಿ ಭಾನುವಾರ ವಿದ್ವಾನ್ ಪ್ರೊ.ಬಿ.ಎಸ್.ವಿಜಯ ರಾಘವನ್ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿಯನ್ನು ಸಚಿವ ಸಿ.ಟಿ.ರವಿ ಪ್ರದಾನ ಮಾಡಿದರು. ಎಸ್‌.ಎ.ರಾಮದಾಸ್‌, ವಿಜಯ ರಾಘವನ್‌ ಪತ್ನಿ ಜಯಲಕ್ಷ್ಮಿ, ಪುಷ್ಪಲತಾ, ಆರ್‌.ಅಶೋಕ, ವಿ.ಸೋಮಣ್ಣ, ಸಂಸದ ಎಸ್‌.ಮುನಿಸ್ವಾಮಿ ಇದ್ದಾರೆ   

ಮೈಸೂರು: ಮೈಸೂರಿನ ವಿದ್ವಾನ್ ಪ್ರೊ.ಬಿ.ಎಸ್.ವಿಜಯ ರಾಘವನ್ ಅವರಿಗೆ 2019ನೇ ಸಾಲಿನ ’ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಅರಮನೆ ಎದುರಿನ ವೇದಿಕೆಯಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿಯು ₹ 5 ಲಕ್ಷ ನಗದು, ಫಲಕ ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ.

ಸಂಗೀತ ಹಾಗೂ ನೃತ್ಯ ಪ್ರಿಯರ ನೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಇದೇ ವೇದಿಕೆಯಲ್ಲಿ ಚಾಲನೆ ನೀಡಲಾಯಿತು.

ADVERTISEMENT

‘ದಸರೆಯು ನಾಗರಿಕತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿದೆ. ಎಷ್ಟೋ ದೇಶಗಳಲ್ಲಿ ಆಧುನಿಕತೆಯ ಆವಿಷ್ಕಾರ ಆಗಿರಬಹುದು. ಆದರೆ, ಪಾರಂಪರಿಕ ಶ್ರಿಮಂತಿಕೆ ಭಾರತದಲ್ಲಿ ಇರುವಷ್ಟು ಬೇರೆ ದೇಶಗಳಲ್ಲಿ ಇಲ್ಲ. ಆಧುನಿಕತೆಯಲ್ಲೂ ನಾವು ಹಿಂದೆ ಬಿದ್ದಿಲ್ಲ’ ಎಂದು ಸಿ.ಟಿ.ರವಿ ಹೇಳಿದರು.

‘ಬಹುತ್ವದ ಬಗ್ಗೆ ಬಹಳ ಜನ ಮಾತನಾಡುತ್ತಿದ್ದಾರೆ. ಆದರೆ, ಈ ದೇಶದ ಮಣ್ಣಿನ ಗುಣವೇ ಬಹುತ್ವವನ್ನು ಒಪ್ಪಿಕೊಳ್ಳುವಂಥದ್ದು. ಏಕತೆಯನ್ನು ಪ್ರತಿಪಾದನೆ ಮಾಡಲಿಲ್ಲ, ಏಕದಾರಿಯನ್ನು ಹೇಳಲಿಲ್ಲ’ ಎಂದರು.

‘ಸಾತ್ವಿಕ ಭಾವವನ್ನು ದುರ್ಗೆ ಜಾಗೃತಗೊಳಿಸಲಿ. ಅಂತಿಮ ವಿಜಯ ದೇವತೆಗಳಿಗೇ ಹೊರತೂ; ದುಷ್ಟಶಕ್ತಿಗಳಿಗೆ, ಅಸುರರಿಗೆ ಅಲ್ಲ. ಈಗ ಅಸುರರು ಇಲ್ಲದೇ ಇರಬಹುದು. ಆದರೆ, ಅಸುರ ಮನಸ್ಥಿತಿಯ ಜನ ಇದ್ದಾರೆ. ಇಂಥ ಮನಸ್ಥಿತಿಯ ಜನರ ಮೇಲೆ ಒಳ್ಳೆಯ ಜನರ ಮನಸ್ಥಿತಿಯ ಜನರಿಗೆ ಗೆಲುವು ಸಿಗಲಿ’ ಎಂದು ಆಶಿಸಿದರು.

ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ‘ಕಲೆ ಮತ್ತು ಇತಿಹಾಸ ನಾಡಿನ ಶ್ರೀಮಂತಿಕೆಯ ಸಂಕೇತ. ದಸರೆಯ ಭವ್ಯ ಪರಂಪರೆಯನ್ನು ದೇಶದುದ್ದಕ್ಕೂ ಪಸರಿಸಬೇಕಿದೆ’ ಎಂದರು.

ವಿದುಷಿ ರಾಧಿಕಾ ನಂದಕುಮಾರ್‌ ತಂಡದವರು ಜಯಚಾಮರಾಜ ಒಡೆಯರ್‌ ಕೃತಿ ಆಧಾರಿತ ನೃತ್ಯ ರೂಪಕ ಪ್ರಸ್ತುತಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ, ಕಂದಾಯ ಸಚಿವ ಆರ್. ಅಶೋಕ, ಸಂಸದರಾದ ಪ್ರತಾಪಸಿಂಹ, ಎಸ್‌.ಮುನಿಸ್ವಾಮಿ, ಶಾಸಕ ಎಲ್‌.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳ ಶ್ಯಾಂ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಸಿಇಓ ಕೆ.ಜ್ಯೋತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಜಾನಕಿ, ಉಪನಿರ್ದೇಶಕ ಚನ್ನಪ್ಪ, ದಸರಾ ಸಾಂಸ್ಕೃತಿಕ ಉಪಸಮಿತಿ ಅಧ್ಯಕ್ಷ ಫಣೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.