ಮೈಸೂರು: ಮೇಕೆಗಳನ್ನು ಕದ್ದು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಬೆಲವತ್ತ ಗ್ರಾಮದಲ್ಲಿ ಇಬ್ಬರು ಯುವಕರ ಮೇಲೆ ಗುಂಪೊಂದು ಭಾನುವಾರ ಹಲ್ಲೆ ನಡೆಸಿದ್ದು, ಒಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೆಸರೆ ನಿವಾಸಿ ಜಹೀರುದ್ದೀನ್ (35) ಮೃತಪಟ್ಟವರು. ರಾಜೇಂದ್ರನಗರದ ನಿವಾಸಿ ಕಾರ್ತಿಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇವರಿಬ್ದರೂ ಬೆಲವತ್ತ ಬಳಿ ಮೇಕೆಗಳನ್ನು ಕಳವು ಮಾಡಿ ಆಟೊದಲ್ಲಿ ಸಾಗಿಸುತ್ತಿದ್ದರು ಎಂದು ಆರೋಪಿಸಿದ ಗುಂಪು, ಮೊದಲಿಗೆ ಕಾರ್ತೀಕ್ ಮೇಲೆ ಹಲ್ಲೆಗೆ ಮುಂದಾಗಿದೆ. ಈ ವೇಳೆ, ಜಹೀರುದ್ದೀನ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಆಟೊ ಗ್ರಾಮದ ಮುಖ್ಯರಸ್ತೆಯಲ್ಲಿ ಅವರ ಮೇಲೆಯೇ ಮಗುಚಿ ಬಿದ್ದಿದೆ. ಗಾಯಗೊಂಡಿದ್ದ ಅವರನ್ನು ಹಿಡಿದ ಗುಂಪು, ತೀವ್ರ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಮೇಟಗಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಜಹೀರುದ್ದೀನ್ ಮೇಲೆ ಆಟೊ ಮಗುಚಿ ಬಿದ್ದು, ಮೃತಪಟ್ಟಿದ್ದಾರೆಯೇ ಹೊರತು ಹಲ್ಲೆಯಿಂದ ಅಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ಜಹೀರುದ್ದೀನ್ ಸೋದರ ರೆಹಮತ್ ಉಲ್ಲಾ ನೀಡಿದ ದೂರಿನ ಅನ್ವಯ, ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ
ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.