ADVERTISEMENT

ಸಂಗೀತ ಪ್ರೌಢಿಮೆ ಹೊಂದಿದ್ದ ವಿವೇಕಾನಂದರು: ಸ್ವಾಮಿ ಸರ್ವ ಜಯಾನಂದ

ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವ ಜಯಾನಂದ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 6:14 IST
Last Updated 12 ಜನವರಿ 2022, 6:14 IST
ನಗರದ ಸಂಗೀತ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಸ್ವಾಮಿ ಸರ್ವ ಜಯಾನಂದರು ಪುಷ್ಪನಮನ ಸಲ್ಲಿಸಿದರು. ಪ್ರೊ.ನಾಗೇಶ ವಿ. ಬೆಟ್ಟಕೋಟೆ, ರೇಣುಕಾಂಬ ಇದ್ದರು
ನಗರದ ಸಂಗೀತ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಸ್ವಾಮಿ ಸರ್ವ ಜಯಾನಂದರು ಪುಷ್ಪನಮನ ಸಲ್ಲಿಸಿದರು. ಪ್ರೊ.ನಾಗೇಶ ವಿ. ಬೆಟ್ಟಕೋಟೆ, ರೇಣುಕಾಂಬ ಇದ್ದರು   

ಮೈಸೂರು: ‘ಸ್ವಾಮಿ ವಿವೇಕಾನಂದರಿಗೆ ಚಿಕ್ಕಂದಿನಲ್ಲೇ ಸಂಗೀತದಲ್ಲಿ ಪ್ರೌಢಿಮೆ ಇತ್ತು. ಪಕ್ಕವಾದ್ಯಗಳನ್ನು ಚೆನ್ನಾಗಿ ನುಡಿಸುತ್ತಿದ್ದರು. ಸಂಗೀತಕ್ಕೆ ಜೀವ ಬರುವಂತೆ ಭಾವಭಕ್ತಿಯಿಂದ ಹಾಡುತ್ತಿದ್ದರು’ ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಸರ್ವ ಜಯಾನಂದ ತಿಳಿಸಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನದ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವೇಕಾನಂದರು ‘ಸಂಗೀತ ಕಲ್ಪತರು’ ಎಂಬ ಕೃತಿಯನ್ನು ಬೆಂಗಾಳಿ ಭಾಷೆಯಲ್ಲಿ ರಚಿಸಿದ್ದರು. ಅವರ ಹಾಡು ಕೇಳಿ ರಾಮಕೃಷ್ಣ ಪರಮಹಂಸರು ಭಾವಸಮಾಧಿಗೆ ಹೋಗುತ್ತಿದ್ದರು. ವಿವೇಕಾನಂದರಿಗೆ ಇತಿಹಾಸ, ವಿಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳ ಬಗ್ಗೆ ಆಳವಾದ ಜ್ಞಾನವಿತ್ತು’ ಎಂದು ಹೇಳಿದರು.

ADVERTISEMENT

‘ಸಂಗೀತ ಎನ್ನುವುದು ಗಿಮಿಕ್‌ ಅಲ್ಲ. ಕಂಠವನ್ನು ಇಟ್ಟುಕೊಂಡು ಮಾಡುವ ಸರ್ಕಸ್‌ ಅಲ್ಲ. ಸಂಗೀತಕ್ಕೆ ಭಾವವಿದೆ. ದಿವ್ಯತೆಗೆ ಕೊಂಡೊಯ್ಯುವ ಶಕ್ತಿ ಇದೆ’ ಎಂದು ಅಭಿಪ್ರಾಯಪಟ್ಟರು.

‘ವಿದೇಶಿ ಪ್ರಜೆಗಳಿಗೆ ದೇಶಪ್ರೇಮ ಹೆಚ್ಚು. ಆದರೆ, ನಮ್ಮಲ್ಲಿ ದೇಶಪ್ರೇಮದ ಕೊರತೆ ಇದೆ. ಧರ್ಮ ಮತ್ತು ಅಧ್ಯಾತ್ಮವನ್ನು ನಿರ್ಲಕ್ಷಿಸಬಾರದು. ಎಲ್ಲ ಧರ್ಮಗಳು ಸನಾತನ ಧರ್ಮದ ಮುಖಗಳು. ಹೀಗಾಗಿ, ಭಾರತದ ಸಂಸ್ಕೃತಿಯ ಘನತೆಯನ್ನು ಎತ್ತಿಹಿಡಿಯಬೇಕು’ ಎಂದು ಸಲಹೆ ನೀಡಿದರು.

ಸಂಗೀತ ವಿ.ವಿ ಕುಲಪತಿ ಪ್ರೊ.ನಾಗೇಶ ವಿ. ಬೆಟ್ಟಕೋಟೆ ಮಾತನಾಡಿ, ‘ನಿಮ್ಮ ಜೀವನವನ್ನು ಕಟ್ಟಿಕೊಳ್ಳಲು ನಿಮ್ಮಿಂದ ಮಾತ್ರ ಸಾಧ್ಯ. ಹೀಗಾಗಿ, ಅನ್ಯರ ಮಾತಿಗೆ ಕಿವಿಗೊಡದೆ ಸನ್ಮಾರ್ಗದಲ್ಲಿ ಸಾಗಬೇಕು. ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ರೇಣುಕಾಂಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.