ADVERTISEMENT

ವಿವಿಧ ಕಾರಣ: 1,20,786 ಹೆಸರು ಡಿಲೀಟ್

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 15:33 IST
Last Updated 30 ನವೆಂಬರ್ 2022, 15:33 IST
ಡಾ.ಕೆ.ವಿ.ರಾಜೇಂದ್ರ
ಡಾ.ಕೆ.ವಿ.ರಾಜೇಂದ್ರ   

ಮೈಸೂರು: ‘ಯಾವುದೇ ಅರ್ಹ ಮತದಾರರನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ತೆಗೆದು ಹಾಕಿಲ್ಲ. ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಗೊಂದಲಗಳಿಗೆ ಒಳಗಾಗಬಾರದು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸ್ಪಷ್ಟಪಡಿಸಿದರು.

ಇಲ್ಲಿ ಬುಧವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾದ ಪ್ರಕ್ರಿಯೆ. ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಪಟ್ಟಿಯನ್ನು ಪರಿಶೀಲಿಸುತ್ತಾರೆ. ಚುನಾವಣಾ ಆಯೋಗದ ನಿರ್ದೇಶನದಂತೆ ಪುನರಾವರ್ತನೆಗೊಂಡ ಪ್ರಕರಣಗಳಲ್ಲಿ ಮತದಾರರನ್ನು ಕೈಬಿಡುವ ಪ್ರಕ್ರಿಯೆ ಕಾನೂನು ಬದ್ಧವಾಗಿಯೇ ನಡೆದಿದೆ’ ಎಂದು ತಿಳಿಸಿದರು.

ADVERTISEMENT

ಪರಿಶೀಲಿಸಿ: ‘ನಿಗದಿತ ನಮೂನೆ-7ನ್ನು ಪಡೆದುಕೊಂಡ ನಂತರ ಸ್ಥಳ ಪರಿಶೀಲನೆಯ ಹಾಗೂ ಬೂತ್ ಮಟ್ಟದ ಅಧಿಕಾರಿಗಳ ವರದಿಯ ನಂತರ ಮತದಾರರನ್ನು ಪಟ್ಟಯಿಂದ ಕೈಬಿಡಲಾಗಿದೆ. ಇದು ಪಾರದರ್ಶಕವಾಗಿದೆ’ ಎಂದು ಹೇಳಿದರು.

‘ಮರಣ ಹೊಂದಿದವರು, ಸ್ಥಳಾಂತರ, ಪುನರಾವರ್ತನೆ, ಒಂದೇ ರೀತಿಯ ಭಾವಚಿತ್ರಗಳನ್ನು ಹೊಂದಿರುವ ಕಾರಣಗಳನ್ನು ಪರಿಶೀಲಿಸಲಾಗುತ್ತದೆ. ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮರಣ ಹೊಂದಿದ 20,440, ಸ್ಥಳಾಂತರ ಹೊಂದಿದ ಕಾರಣದಿಂದ 16,933, ಪುನರಾವರ್ತನೆ ಇದ್ದಿದ್ದರಿಂದ 2,227 ಹಾಗೂ ಒಂದೇ ರೀತಿಯ ಭಾವಚಿತ್ರ ಹೊಂದಿದ್ದರಿಂದ 80,930 ಸೇರಿದಂತೆ ಒಟ್ಟು 1,20,786 ಹೆಸರುಗಳನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟರು ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈ ಬಿಟ್ಟು ಹೋಗಿದ್ದರೆ ಅಂಥವರ ಮಾಹಿತಿಯನ್ನು ಬಿಎಲ್ಒಗಳಿಗೆ, ಎಆರ್‌ಒಗಳಿಗೆ, ತಹಶಿಲ್ದಾರರಿಗೆ ಹಾಗೂ ನನಗೂ ಮಾಹಿತಿ ನೀಡಬಹುದು. ಉದ್ದೇಶಪೂರ್ವಕವಾಗಿ ಹೆಸರು ತೆಗೆದು ಹಾಕಿರುವುದು ಕಂಡುಬಂದರೆ ತನಿಖೆ ನಡೆಸಿ ಕಾರಣವಾದಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ಸರಿಪಡಿಸಿಕೊಳ್ಳಬಹುದು: ‘ತಮ್ಮ ಹೆಸರು ಬೇರೆ ಬೂತ್‌ಗಳಿಗೆ ಬದಲಾವಣೆ ಆಗಿದ್ದರೆ ನಮೂನೆ ನಂ.8ರಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಯಾರದ್ದಾದರೂ ಹೆಸರು ಬಿಟ್ಟು ಹೋಗಿದ್ದರೆ ನಮೂನೆ ನಂ.6ರಲ್ಲಿ ಅರ್ಜಿ ಸಲ್ಲಿಸಿ ಸೇರ್ಪಡೆ ಮಾಡಬಹುದಾಗಿದೆ. ವೋಟರ್ ಹೆಲ್ಪ್‌ಲೈನ್‌ ಸಹಾಯವಾಣಿ ಮೂಲಕವೂ ಆನ್‌ಲೈನ್ ಅರ್ಜಿ ಸಲ್ಲಿಸಬಹುದು’ ಎಂದರು.

‘ವಿದ್ಯುನ್ಮಾನ ಮತಯಂತ್ರಗಳು ಜಿಲ್ಲೆಗಷ್ಟೆ ಬಂದಿಲ್ಲ. ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಜಿಲ್ಲೆಗಳಿಗೂ ಹೊಸದಾಗಿ ಸರಬರಾಜಾಗುತ್ತಿವೆ. ಅನವಶ್ಯ ಗೊಂದಲ ಬೇಡ. ಗೊಂದಲಗಳಿದ್ದರೆ ಚುನಾವಣೆ ಶಾಖೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಥವಾ ನನ್ನನ್ನು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು’ ಎಂದು ಕೋರಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ, ‘ರಾಜ್ಯದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಒಂದೇ ರೀತಿಯ ಫೋಟೊ (ಪೋಟೊ ಸಿಮಿಲರ್ ಎಂಟ್ರಿ) ಇರುವ 1,73,943 ಪ್ರಕರಣಗಳಿದ್ದವು. ಅವುಗಳನ್ನು ಪರಿಶೀಲಿಸಿ ಕರುಡು ಮತದಾರರ ಪಟ್ಟಿಯಿಂದ 80,930 ಹೆಸರನ್ನು ಕೈಬಿಡಲಾಗಿದೆ’ ಎಂದು ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಚುನಾವಣಾ ತಹಶೀಲ್ದಾರ್ ರಾಮ್‌ಪ್ರಸಾದ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.