ADVERTISEMENT

ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ

ಹಲವೆಡೆ ದರ್ಶನ ಇಲ್ಲ, ಕೆಲವೆಡೆ ಸೀಮಿತ ಪ್ರವೇಶವಕಾಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 12:27 IST
Last Updated 25 ಡಿಸೆಂಬರ್ 2020, 12:27 IST
ಇಸ್ಕಾನ್‌ ದೇಗುಲದಲ್ಲಿ ಶುಕ್ರವಾರ ‘ವೈಕುಂಠ ದ್ವಾರ’ ನಿರ್ಮಿಸಿ ಭಕ್ತರಿಗೆ ಪ್ರವೇಶದ ಅವಕಾಶ ನೀಡಲಾಗಿತ್ತು
ಇಸ್ಕಾನ್‌ ದೇಗುಲದಲ್ಲಿ ಶುಕ್ರವಾರ ‘ವೈಕುಂಠ ದ್ವಾರ’ ನಿರ್ಮಿಸಿ ಭಕ್ತರಿಗೆ ಪ್ರವೇಶದ ಅವಕಾಶ ನೀಡಲಾಗಿತ್ತು   

ಮೈಸೂರು: ನಗರದಲ್ಲಿ ವೈಕುಂಠ ಏಕಾದಶಿಯನ್ನು ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ‌

ಕೋವಿಡ್ ಭೀತಿಯಿಂದ ಹಲವು ದೇಗುಲಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಒಂಟಿಕೊಪ್ಪಲಿನ ಲಕ್ಷ್ಮಿವೆಂಕಟರಮಣಸ್ವಾಮಿ ದೇಗುಲಕ್ಕೆ ನಸುಕಿನಿಂದಲೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಆದರೆ, ಭಕ್ತರಿಗೆ ಪ್ರವೇಶವಕಾಶ ನೀಡಿರಲಿಲ್ಲ. ಹೀಗಾಗಿ, ಹೊರಗಡೆಯೇ ಪೂಜೆ ಸಲ್ಲಿಸಿ ಹಲವರು ವಾಪಸ್ ತೆರಳಿದರು.

ಇಲ್ಲಿನ ಇಸ್ಕಾನ್‌ ದೇಗುಲದಲ್ಲಿ ಬೆಳಿಗ್ಗೆ 6.15ಕ್ಕೆ ದೇವರ ದರ್ಶನ ಆರಂಭವಾಗಿ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಿತು. ನಂತರ, ಸಂಜೆ 4ರಿಂದ ರಾತ್ರಿ 8.30ರವರೆಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇಲ್ಲಿ ನಿರ್ಮಿಸಿದ್ದ ‘ವೈಕುಂಠ ದ್ವಾರ’ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಕೃಷ್ಣ ಮತ್ತು ಬಲರಾಮ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ADVERTISEMENT

ಊಟಿ ರಸ್ತೆಯಲ್ಲಿರುವ ಅವಧೂತ ದತ್ತಪೀಠದಲ್ಲಿನ ವೆಂಕಟೇಶ್ವರಸ್ವಾಮಿ ದೇಗುಲದಲ್ಲಿಯೂ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀದೇವಿ, ಭೂದೇವಿ ಸಹಿತವಾದ ಅಲಂಕಾರ ನೋಡುಗರನ್ನು ಬಹುವಾಗಿ ಸೆಳೆಯಿತು.‌‌

ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1, ಸಂಜೆ 4 ಗಂಟೆಯಿಂದ ರಾತ್ರಿ 8ವರೆಗೆ ಮಾತ್ರ ಪ್ರವೇಶವಕಾಶ ನೀಡಲಾಗಿತ್ತು. ಪ್ರತಿ ವರ್ಷ ಇಲ್ಲಿ 70ರಿಂದ 75 ಸಾವಿರ ಮಂದಿ ದರ್ಶನ ಪಡೆಯುತ್ತಿದ್ದರು. ಕೋವಿಡ್ ಕಾರಣದಿಂದಾಗಿ ಈ ಬಾರಿ ಕೇವಲ 10 ಸಾವಿರ ಮಂದಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ಇದಕ್ಕಾಗಿ ಮುಂಚಿತವಾಗಿಯೇ ಪಾಸ್ ವಿತರಿಸಲಾಗಿತ್ತು.

ಇನ್ನುಳಿದಂತೆ ಜಯನಗರದ ಶ್ರೀನಿವಾಸ ದೇಗುಲ ಹಾಗೂ ವಿವಿಧ ಬಡಾವಣೆಗಳಲ್ಲಿನ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.