ADVERTISEMENT

ನದಿಗೆ ತ್ಯಾಜ್ಯ ನೀರು; ಕಾಯಕಲ್ಪಕ್ಕೆ ಹೊಸ ಯೋಜನೆ

ಲಕ್ಷ್ಮಣತೀರ್ಥ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ‌

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 16:04 IST
Last Updated 8 ಜೂನ್ 2023, 16:04 IST
ಹುಣಸೂರು ನಗರದ ಪಂಪ್‌ಹೌಸ್ ಬಳಿ ತಾಲ್ಲೂಕಿನ ಜೀವನದಿ ಲಕ್ಷ್ಮಣತೀರ್ಥಕ್ಕೆ ತ್ಯಾಜ್ಯ ನೀರು ಸೇರುತ್ತಿರುವುದನ್ನು ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು
ಹುಣಸೂರು ನಗರದ ಪಂಪ್‌ಹೌಸ್ ಬಳಿ ತಾಲ್ಲೂಕಿನ ಜೀವನದಿ ಲಕ್ಷ್ಮಣತೀರ್ಥಕ್ಕೆ ತ್ಯಾಜ್ಯ ನೀರು ಸೇರುತ್ತಿರುವುದನ್ನು ಶಾಸಕ ಹರೀಶ್ ಗೌಡ ಭೇಟಿ ನೀಡಿ ಪರಿಶೀಲಿಸಿದರು   

ಹುಣಸೂರು: ‘ಜೀವನದಿ ಲಕ್ಷ್ಮಣತೀರ್ಥ ನದಿಗೆ ಕಲುಷಿತ ನೀರು ಸೇರಿ ಕಶ್ಮಲವಾಗಿದ್ದು, ನದಿಗೆ ತ್ಯಾಜ್ಯ ನೀರು ಸೇರುವ ಕೇಂದ್ರಗಳಿಗೆ ಭೇಟಿ ನೀಡಿ ನುರಿತ ತಜ್ಞರೊಂದಿಗೆ ಚರ್ಚಿಸಿ ಕಾಯಕಲ್ಪ ಕ್ರಮ ವಹಿಸುವ ಉದ್ದೇಶದಿಂದ ತಜ್ಞರೊಂದಿಗೆ ಭೇಟಿ ನೀಡಿದ್ದೇನೆ’ ಎಂದು ಶಾಸಕ ಹರೀಶ್ ಗೌಡ ಹೇಳಿದರು.

ನಗರದ ಮಧ್ಯ ಭಾಗದಲ್ಲಿ ಹಾದು ಹೋಗುವ ಜೀವನದಿ ಲಕ್ಷ್ಮಣತೀರ್ಥ ನದಿಗೆ ತ್ಯಾಜ್ಯ ನೀರು ಸೇರುವ 10 ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದರು.

‘ತಾಲ್ಲೂಕಿನ ಜೀವನದಿ ಬದುಕುಳಿಸಿಕೊಳ್ಳುವ ಪ್ರಯತ್ನ ಪ್ರತಿಯೊಬ್ಬರಿಂದಲೂ ಆಗಬೇಕಾಗಿದೆ. ನಾಗರಿಕರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಅಧಿಕಾರಿ ವರ್ಗ ತ್ಯಾಜ್ಯ ನೀರು ನದಿಗೆ ಸೇರದಂತೆ ಸೂಕ್ತ ಕ್ರಮವಹಿಸಿ ಅಗತ್ಯ ಯೋಜನೆ ರೂಪಿಸಬೇಕು’ ಎಂದರು.

ADVERTISEMENT

‘ಈಗಾಗಲೇ ಕೆಲವು ಯೋಜನೆ ಜಾರಿಗೊಂಡು ಅನುದಾನ ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದ್ದು, ಬಡಾವಣೆಯಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ತ್ಯಾಜ್ಯ ನೀರು ನದಿಗೆ ಹರಿದಿದೆ. ಒಳಚರಂಡಿ ಯೋಜನೆ ಈ ಹಿಂದಿನ ಸರ್ಕಾರದಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು ಎಂಬ ಮಾಹಿತಿ ಅಧಿಕಾರಿ ನೀಡಿದ್ದು, ಈ ಸಂಬಂಧ ಸಚಿವಾಲಯದಲ್ಲಿ ಗಮನಿಸುತ್ತೇನೆ’ ಎಂದರು.

ಪಂಪ್‌ಹೌಸ್ ನಿರ್ವಹಣೆ: ಲಕ್ಷ್ಮಣತೀರ್ಥ ನದಿ ಅಂಚಿನಲ್ಲಿನ ಪಂಪ್‌ಹೌಸ್ ನಿರ್ವಹಣೆ ಕುರಿತು ಬೇಸರ ವ್ಯಕ್ತಪಡಿಸಿದ ಶಾಸಕರು, ಸುಭದ್ರ ಕಟ್ಟಡವಿದ್ದರೂ ನಗರಸಭೆ ಸಮರ್ಪಕವಾಗಿ ನಿರ್ವಹಣೆ ಮಾಡದೆ ಶಿಥಿಲಗೊಂಡಿದೆ. ನದಿ ನೀರು ಶುದ್ಧೀಕರಿಸುವ ಘಟಕ ಕೆಲಸಕ್ಕೆ ಬಾರದಂತಾಗಿದೆ. ಹಳೆ ಪಂಪ್‌ಹೌಸ್‌ನಲ್ಲಿ ಹಾಲಿ ಎರಡು ಮೋಟಾರ್ ಸುಸ್ಥಿತಿಯಲ್ಲಿದ್ದು, ಉಳಿದಂತೆ ಎಲ್ಲವೂ ಹಾಳಾಗಿದೆ. ಈ ಎಲ್ಲದರ ಬಗ್ಗೆ ಮುಂದಿನ ದಿನಗಳಲ್ಲಿ ನಗರಸಭೆ ಅಧಿಕಾರಿ ಮತ್ತು ಸದಸ್ಯರ ಸಭೆಯಲ್ಲಿ ಚರ್ಚಿಸಲಿದ್ದೇನೆ ಎಂದರು.

ಜಾಥಾ: ನಗರದ ಕಲ್ಪತರು ವೃತ್ತದಲ್ಲಿ ಕರಾವೆ, ಸರ್ಕಾರಿ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ ವಿಭಾಗ, ಜನಸ್ನೇಹಿ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಲಕ್ಷ್ಮಣತೀರ್ಥ ಉಳಿಸಿ ಜಾಥಾ ನಡೆಸಿದರು.

ರಂಗಸ್ನೇಹ ಕಲಾವಿದರಿಂದ ನದಿ ಸಂರಕ್ಷಣೆ ಕುರಿತು ಬೀದಿನಾಟಕ ಹಮ್ಮಿಕೊಂಡಿದ್ದರು. ಶಾಸಕರ ಭೇಟಿ ಸಮಯದಲ್ಲಿ ನಗರಸಭೆ ಪೌರಾಯುಕ್ತ ಸುಜಯ್ ಕುಮಾರ್, ಪರಿಸರ ಎಂಜಿನಿಯರ್ ರೂಪಾ, ಎಇಇ ಶರ್ಮಿಳಾ, ಹುಡಾ ಕಾರ್ಯದರ್ಶಿ ಶ್ರೀಧರ್, ವಾಟರ್ ಬೋರ್ಡ್ ಎಇಇ ಸುಹೇಲ್, ಎಇ ಕಲೀಂ ಮತ್ತು ಜೆಡಿಎಸ್ ಮುಖಂಡರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.