ಮೈಸೂರು: ‘ಮತದಾರರಿಗೆ ಭರಪೂರ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು 10 ವರ್ಷ ಕಳೆದಿದೆ. ದೇಶಕ್ಕೆ ಅಚ್ಛೇದಿನ್ ಬರುವುದು ಯಾವಾಗ’ ಎಂದು ಶಾಸಕ ಕೆ.ಹರೀಶ್ ಗೌಡ ಪ್ರಶ್ನಿಸಿದರು.
ಇಲ್ಲಿನ ಲೋಕನಾಯಕ ನಗರ, ಜನತಾ ನಗರ, ಜಯಲಕ್ಷ್ಮೀಪುರಂನ ಮನೆ ಮನೆಗೆ ಬುಧವಾರ ತೆರಳಿದ ಅವರು, ಸರ್ಕಾರದ ಐದು ಗ್ಯಾರಂಟಿಗಳ ಕರಪತ್ರವನ್ನು ವಿತರಿಸಿ ಪಕ್ಷದ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರಿಗೆ ಮತ ನೀಡುವಂತೆ ಮನವಿ ಮಾಡಿ, ಮಾತನಾಡಿದರು.
‘ಅದಾನಿ, ಅಂಬಾನಿ ಪರ ಆಡಳಿತ ನಡೆಸುವ ಮೂಲಕ ಬಿಜೆಪಿಯು ಬಡವರು, ಕಾರ್ಮಿಕರು ಹಾಗೂ ಸಾಮಾನ್ಯ ಜನರನ್ನು ಬೀದಿಗೆ ತಳ್ಳುತ್ತಿದೆ. ದೇಶದ ಜನರು ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಚಾರ ತಂಡದಲ್ಲಿ ಪ್ರಮುಖರಾದ ಪೈಲ್ವಾನ್ ಶ್ರೀನಿವಾಸ್, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಕೇಬಲ್ ನಾಗರಾಜ್, ಕೃಷ್ಣಪ್ಪ, ಸುಪ್ರೀಂ ಮಂಜು, ಭಾಸ್ಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.