ADVERTISEMENT

ಹುಣಸೂರು: ಮರಗೆಲಸದವರ ಬದುಕು ಅತಂತ್ರ

ಹುಣಸೂರು ನಗರದ ಕುಶಲಕರ್ಮಿಗಳಿಗೂ ತಟ್ಟಿದ ಲಾಕ್‌ಡೌನ್‌ ಬಿಸಿ

ಎಚ್.ಎಸ್.ಸಚ್ಚಿತ್
Published 14 ಜೂನ್ 2021, 3:13 IST
Last Updated 14 ಜೂನ್ 2021, 3:13 IST
ಹುಣಸೂರು ನಗರದ ನ್ಯೂ ರತ್ನಾಪುರಿ ರಸ್ತೆಯಲ್ಲಿನ ಪೀಠೋ‍‍ಪಕರಣ ಮಳಿಗೆಗಳು ಬಂದ್ ಆಗಿರವುದು
ಹುಣಸೂರು ನಗರದ ನ್ಯೂ ರತ್ನಾಪುರಿ ರಸ್ತೆಯಲ್ಲಿನ ಪೀಠೋ‍‍ಪಕರಣ ಮಳಿಗೆಗಳು ಬಂದ್ ಆಗಿರವುದು   

ಹುಣಸೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಮರದ ಪೀಠೋಪಕರಣಗಳನ್ನು ಮಾಡುವ ಕುಶಲಕರ್ಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಪೀಠೋಪಕರಣ ಸಿದ್ಧಪಡಿಸುವ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿ ಕೆಲಸ ಇಲ್ಲದೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ.

ಕೊರೊನಾ ಲಾಕ್‌ಡೌನ್ ಇವರ ಬದುಕನ್ನೇ ಹೈರಾಣು ಮಾಡಿದೆ. ಕಳೆದ ವರ್ಷವೂ ಇದೇ ಅವಧಿಯಲ್ಲಿ ಲಾಕ್‌ಡೌನ್‌ ಆಗಿ ತೊಂದರೆ ಅನುಭವಿಸಿದ್ದರು.

ADVERTISEMENT

‘ಹುಣಸೂರು ನಗರದಲ್ಲಿ 100 ರಿಂದ 150 ಪೀಠೋಪಕರಣ ಸಿದ್ಧಪಡಿಸುವ ಮಳಿಗೆಗಳಿದ್ದು, ಇವುಗಳಲ್ಲಿ 250 ರಿಂದ 300 ಕುಶಲಕರ್ಮಿಗಳು ಜೀವನ ಕಟ್ಟಿಕೊಂಡಿದ್ದಾರೆ. ಕೋವಿಡ್‌ ಎರಡನೇ ಅಲೆ ತಡೆಗೆ ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ಮಳಿಗೆಗಳು ಬಾಗಿಲು ಮುಚ್ಚಿ ವೃತ್ತಿ ನಂಬಿದವರ ಬದುಕು ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ’ ಎಂದು ಕೃಷ್ಣ ಫರ್ನಿಚರ್ಸ್ ಮಾಲೀಕ ಪುರುಷೋತ್ತಮ್ ಅಳಲು ತೋಡಿಕೊಂಡರು.

‘ನಮ್ಮ ಅಂಗಡಿಯಲ್ಲಿ ಎಂಟು ಮಂದಿ ಕಾಯಂ ನೌಕರರಿದ್ದು, ಈಗ ಅವರಿಗೆ ಕೆಲಸವಿಲ್ಲದಾಗಿದೆ. ಇವರ ಜೀವನ ನಿರ್ವಹಣೆ ಜವಾಬ್ದಾರಿ ನಮ್ಮ ಮೇಲಿದೆ. ತಿಂಗಳಿಗೆ ₹ 5 ರಿಂದ ₹ 6 ಸಾವಿರವನ್ನು ಯಾವುದೇ ವ್ಯವಹಾರ ಇಲ್ಲದಿದ್ದರೂ ಭರಿಸಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

‘ಲಾಕ್‌ಡೌನ್‌ಗೂ ಮುಂಚೆ ನಮಗೆ ತಿಂಗಳಿಗೆ ₹ 40 ರಿಂದ ₹ 50 ಸಾವಿರ ಆದಾಯವಿತ್ತು. ಮರದ ಪೀಠೋಪ
ಕರಣ ಮಾರಾಟವಾಗದೆ ದೂಳು ಹಿಡಿದು ಅಂಗಡಿಯಲ್ಲೇ ಉಳಿದಿದೆ. ಈ ನಷ್ಟ ಭರಿಸುವವರಾರು ಯಾರು’ ಎಂದು ಅವರು
ಪ್ರಶ್ನಿಸುತ್ತಾರೆ.

ನಗರದ ವಿಶ್ವಕರ್ಮ ಸಮುದಾಯದ ಶೇ 65 ರಷ್ಟು ಹಾಗೂ ಮುಸ್ಲಿಂ ಸಮುದಾಯದ ಶೇ 35 ರಷ್ಟು ಜನರಿಗೆ ಈ ವೃತ್ತಿಯೇ ಜೀವನಕ್ಕೆ
ಆಧಾರ.

‘ಮರದ ಕುಸುರಿ ಕೆಲಸದಲ್ಲಿ ನೈಪುಣ್ಯತೆ ಹೊಂದಿದ್ದು, ಐಷಾರಾಮಿ ಆಸನಗಳಿಗೆ ಆರ್ಟ್ ವರ್ಕ್ ಮಾಡಿ ನಿತ್ಯ ₹ 1 ಸಾವಿರ ದುಡಿಯುತ್ತಿದ್ದೆ. ಕಳೆದ ಒಂದು ತಿಂಗಳಿಂದ ಯಾವುದೇ ದುಡಿಮೆ ಇಲ್ಲವಾಗಿದೆ’ ಎಂದು ನಗರದ ರಿಯಾಜ್ ಫರ್ನಿಚರ್ ಅಂಗಡಿಯ ಇರ್ಫಾನ್‌ ಬೇಸರವ್ಯಕ್ತ‍ಪಡಿಸುತ್ತಾರೆ.

‘ಕೊರೊನಾ ಲಾಕ್‌ಡೌನ್‌ಗೂ ಮುನ್ನ ತಿಂಗಳಿಗೆ ₹ 20 ರಿಂದ ₹25 ಸಾವಿರ ಸಂಪಾದನೆ ಮಾಡುತ್ತಿದೆ. ಪೀಸ್ ವರ್ಕ್ ಕೆಲಸ ಮಾಡಿ ಹಣ ಗಳಿಸುತ್ತಿದ್ದೆ. ಈಗ ಕೆಲಸವೂ ಇಲ್ಲ, ಸಂಸಾರ ಸಾಗಿಸುವುದು ಕಷ್ಟವಾಗಿದೆ. ಸರ್ಕಾರ ಈಗಲಾದರೂ ವೃತ್ತಿಪರರಿಗೆ ಸಮರ್ಪ‍ಕ ಪರಿಹಾರ ಯೋಜನೆ ಘೋಷಿಸಲಿ’ ಎಂದು ಕುಶಲಕರ್ಮಿ ಅತೀಖ್ಆಗ್ರಹಿಸುತ್ತಾರೆ.

‘ಮರಗೆಲಸದವರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು ಎಂದು ಸೂಚನೆ ಇದ್ದರೂ ಬಹಳಷ್ಟು ವೃತ್ತಿಪರರಿಗೆ ಕಾರ್ಡ್ ಇಲ್ಲದೆ ಸರ್ಕಾರದ ಯಾವುದೇ ಸೌಲಭ್ಯ ಕೈಸೇರುತ್ತಿಲ್ಲ. ಕೆಲವರಿಗೆ ಮಾತ್ರ ಉಪಯೋಗವಾಗಿದೆ’ ಎಂದು ರಿಯಾಜ್ ಫರ್ನಿಚರ್ಸ್‌ನ ಇರ್ಫಾನ್ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.